SHIVAMOGGA LIVE NEWS | 6 FEBRUARY 2023
ಶಿವಮೊಗ್ಗ : ಭದ್ರಾವತಿಯ ವಿಐಎಸ್ಎಲ್ (VISL) ಕಾರ್ಖಾನೆ ಪುನಶ್ಚೇತನಗೊಳಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸಬೇಕು ಎಂದು ಆಗ್ರಹಿಸಿ NSUI (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಕಾರ್ಯಕರ್ತರು ಪ್ರತಿಭಟನೆ ನಡಸಿದರು.
ಶಿವಮೊಗ್ಗದ ವೀರಭದ್ರೇಶ್ವರ ಟಾಕೀಸ್ ರಸ್ತೆಯ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಉತ್ಕೃಷ್ಟ ಕಬ್ಬಿಣ ಉತ್ಪಾದಿಸುತ್ತಿತ್ತು
ಆಧುನಿಕ ಮೈಸೂರು ನಿರ್ಮಾತೃಗಳಲ್ಲಿ ಒಬ್ಬರಾದ ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಭದ್ರಾವತಿಯ ವಿ.ಐ.ಎಸ್.ಎಲ್. (VISL) ಕಾರ್ಖಾನೆ ಸ್ಥಾಪನೆಯಾಗಿತ್ತು. ಇದನ್ನು ಕೇಂದ್ರ ಸರ್ಕಾರ ಮುಚ್ಚಲು ಹುನ್ನಾರ ನಡೆಸಿದೆ. ವಿ.ಐ.ಎಸ್.ಎಲ್. ಕಾರ್ಖಾನೆಯು ಏಷ್ಯಾದಲ್ಲಿಯೇ ಉತ್ಕೃಷ್ಟ ಕಬ್ಬಿಣ ಮತ್ತು ಉಕ್ಕು ತಯಾರಿಕೆ ಮಾಡುತ್ತಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.
ಗಣಿ, ಯಂತ್ರೋಪಕರಣ ಒದಗಿಸಲಿಲ್ಲ
ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಗಣಿ ಮತ್ತು ಅಗತ್ಯ ಯಂತ್ರೋಪಕರಣ ಒದಗಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಗಿದೆ. ಇದೀಗ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನ ನಡೆಸುತ್ತಿದೆ. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ. ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಕುಸಿಯುತ್ತಿದೆ. ಇದಕ್ಕೆಲ್ಲ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ಇದನ್ನೂ ಓದಿ – ಅಡಕೆ ಧಾರಣೆ | 6 ಫೆಬ್ರವರಿ 2023 | ರಾಶಿ ಅಡಕೆ ರೇಟ್ ಹೇಗಿದೆ? ಉಳಿದವುಗಳ ಧಾರಣೆ ಎಷ್ಟಿದೆ?
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಎಸ್.ಪಿ. ದಿನೇಶ್, ರಮೇಶ ಹೆಗಡೆ, ರವಿಕುಮಾರ್, ದೀಪಕ್ ಸಿಂಗ್, ಕಲೀಮ್ ಪಾಷಾ, ಚೇತನ್ ಗೌಡ, ಮಧ ಸೂದನ್ ಸೇರಿದಂತೆ ಹಲವರು ಇದ್ದರು.