ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020

ಬಡ್ತಿಯಲ್ಲಿ ವಂಚನೆಯಾಗಿರುವುದನ್ನು ವಿರೋಧಿಸಿ ಕುವೆಂಪು ವಿಶ್ವವಿದ್ಯಾಲಯ ಖರೀದಿ ವಿಭಾಗದ ಮೇಲ್ವಿಚಾರಕಿ ಪದ್ಮಲತಾ ಅವರು ವಿಶ್ವವಿದ್ಯಾಲಯದ ಕುವೆಂಪು ಶತಮಾನೋತ್ಸವ ಭವನದ ಮುಂಭಾಗದಲ್ಲಿ ಬುಧವಾರದಿಂದ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೆ ಬಡ್ತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದರಲ್ಲಿ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಮುಂಬಡ್ತಿ ಸಿಗದೆ ವಂಚನೆಯಾಗಿದೆ, ತಮಗಿಂತ ಕಿರಿಯರಿಗೆ ಮುಂಬಡ್ತಿ ನೀಡಲಾಗಿದೆ. ಇದರ ಬಗ್ಗೆ ಹಲವು ಬಾರಿ ಕುಲಪತಿ, ಕುಲಸಚಿವರಿಗೆ ಮನವಿ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು ಪದ್ಮಲತಾ ಅವರು ಆಪಾದಿಸಿದ್ದಾರೆ.
ಫೆ.18ರೊಳಗೆ ತಮಗೆ ನ್ಯಾಯ ಒದಗಿಸುವಂತೆ ಕುಲಪತಿ ಅವರನ್ನು ಕೋರಲಾಗಿತ್ತು. ಆದರೆ, ಅದಕ್ಕೂ ಸ್ಪಂದನೆ ಸಿಗದ ಕಾರಣ ಸತ್ಯಾಗ್ರಹ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಇದರ ನಡುವೆ ಪದ್ಮಲತಾ ಅವರು ಅನಾರೋಗ್ಯದ ನಡುವೆಯೂ ಉಪವಾಸ ಸತ್ಯಾಗ್ರಹ ನಡೆಸಿರುವುದು ಆತಂಕಕ್ಕೀಡು ಮಾಡಿದೆ. ಕತ್ತಲಾದ ಬಳಿಕವೂ ಅವರು ಸತ್ಯಾಗ್ರಹ ಮುಂದುವರಿಸಿದ್ದಾರೆ.
ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಮತ್ತು ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್ ಅವರು ಕೇಂದ್ರ ಸ್ಥಾನದಿಂದ ಹೊರಗಿದ್ದಾರೆ. ಪದ್ಮಲತಾ ಅವರಿಗೆ ಬಂಬಲ ವ್ಯಕ್ತಪಡಿಸಿ ಬಸವರಾಜ್ ಬಳಿಗಾರ್ ಮತ್ತು ಸುರೇಶ್ ಪಂಡಿತ್ ಅವರೂ ಸಂಜೆ ಬಳಿಕ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]