ಶಿವಮೊಗ್ಗ ಲೈವ್.ಕಾಂ | SAGARA | 17 ಅಕ್ಟೋಬರ್ 2019

ಖಾಲಿ ಸೈಟು, ಕೆರೆ ಅಂಗಳ, ರಸ್ತೆ ಪಕ್ಕದಲೆಲ್ಲೋ ಹೋಗಿ ಕದ್ದು ಮುಚ್ಚಿ ಕಸ ಹಾಕುತ್ತಿದ್ದವರಿಗೆ ಸಾಗರ ನಗರಸಭೆ ಶಾಕ್ ನೀಡಿದೆ. ಇನ್ಮುಂದೆ ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ರಾತ್ರಿ ವೇಳೆ ಕಸ ಹಾಕುವವರಿಗೆ ಬುದ್ದಿ ಕಲಿಸುವ ಸಲುವಾಗಿ ಸಾಗರ ನಗರಸಭೆ ಅಧಿಕಾರಿಗಳು ನೈಟ್ ಬೀಟ್ ಶುರು ಮಾಡಿದ್ದಾರೆ. ಎಲ್ಲೆಂದರಲ್ಲಿ ಕಸ ಹಾಕುವವರನ್ನು ಹಿಡಿದು ಬುದ್ದಿ ಮಾತು ಹೇಳುತ್ತಿದ್ದಾರೆ.
ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ನಗರಸಭೆಯ ಸ್ವಚ್ಛತಾ ವಾಹನಕ್ಕೆ ಹಾಕುವ ಬದಲು ಕೆಲವರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ರಾತ್ರಿ ವೇಳೆ ಕಸ ಎಸೆದು ಹೋಗುವವರೆ ಹೆಚ್ಚು. ಇದನ್ನು ತಡೆಯುವ ಸಲುವಾಗಿ ಸಾಗರ ನಗರಸಭೆ ಅಧಿಕಾರಿಗಳು ಟೀಂ ನೈಟ್ ಬೀಟ್ ಶುರು ಮಾಡಿದೆ.
ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಜನರಿಗೆ ಬುದ್ದಿ ಹೇಳಿ ಕಳುಹಿಸಲಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡಿ ಹೋಗುವವರಿಗೆ ಸದ್ಯ ಬುದ್ದಿ ಮಾತು ಹೇಳಲಾಗುತ್ತಿದೆ. ಇನ್ಮುಂದೆ ಇದು ಮುಂದುವರೆದರೆ ದಂಡ ವಿಧಿಸಲು ಚಿಂತಿಸಲಾಗಿದೆ.
ನಗರಸಭೆಯ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಚ್ಛ ಮತ್ತು ಸುಂದರ ಸಾಗರ ನಗರ ನಿರ್ಮಾಣಕ್ಕೆ ಕಠಿಣ ಕ್ರಮ ಕೈಗೊಂಡಿರುವುದನ್ನು ಜನರು ಸ್ವಾಗತಿಸಿದ್ದಾರೆ.
