ಶಿವಮೊಗ್ಗ ಲೈವ್.ಕಾಂ | SAGARA NEWS | 16 ಡಿಸೆಂಬರ್ 2021
ತುರ್ತು ಸಂದರ್ಭ ಆಂಬುಲೆನ್ಸ್ ಸಿಗದೆ ಮತ್ತೊಬ್ಬರು ಕೊನೆಯುಸಿರೆಳೆದಿದ್ದಾರೆ. ತುಮರಿ ಭಾಗದಲ್ಲಿ ಆಂಬುಲೆನ್ಸ್ ಇಲ್ಲದಿರುವುದರಿಂದ ಕಳೆದ 24 ಗಂಟೆ ಅವಧಿಯಲ್ಲಿ ಇಬ್ಬರು ಜೀವ ಕಳೆದುಕೊಂಡಂತಾಗಿದೆ.
ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟಾಗಿದ್ದ ನಾರಾಯಣ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಚಿಕಿತ್ಸೆ ಫಲಿಸದೆ ನಾರಾಯಣ ಅವರು ಸಂಜೆ ಮೃತಪಟ್ಟಿದ್ದಾರೆ.
ಆಂಬುಲೆನ್ಸ್ ಸಿಗದೆ ನರಳಾಡಿದ್ದರು
ನಾರಾಯಣ ಅವರು ಬುಧವಾರ ರಾತ್ರಿ ಬೈಕ್’ನಲ್ಲಿ ತುಮರಿಯಿಂದ ಕಳಸವಳ್ಳಿಯಲ್ಲಿರುವ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ ದನ ಅಡ್ಡಬಂದಿದ್ದು, ಅಪಘಾತಕ್ಕೀಡಾಗಿ ನಾರಾಯಣ ಮತ್ತು ಬೈಕ್ ಚಾಲನೆ ಮಾಡುತ್ತಿದ್ದ ಬಲರಾಮ ಗಾಯಗೊಂಡಿದ್ದರು.
ಇದನ್ನೂ ಓದಿ | ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ
ನಾರಾಯಣ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿತ್ತು. ಬಲರಾಮನಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೆ ನಾರಾಯಣ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.
ಸಾಗರ, ಶಿವಮೊಗ್ಗ, ಮಂಗಳೂರು
ಆಂಬುಲೆನ್ಸ್ ಸಿಗದಿರುವ ಹಿನ್ನೆಲೆ ಖಾಸಗಿ ವಾಹನದ ವ್ಯವಸ್ಥೆ ಮಾಡಿ, ರಾತ್ರಿ ಲಾಂಚ್ ಮೂಲಕ ಶರಾವತಿ ನದಿ ದಾಟಿಸಲಾಗಿತ್ತು. ಸಾಗರದ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾರಾಯಣ ಅವರು ಮೃತರಾಗಿದ್ದಾರೆ.
ದಿನಸಿ ಖರೀದಿಸಿ ಮನೆಗೆ ಹೋಗುತ್ತಿದ್ದರು
ಪ್ಲಾಂಟೇಷನ್’ಗಳಲ್ಲಿ ಅಕೇಷಿಯಾ ಮರಗಳ ಕಡಿತಲೆ ಕೆಲಸದಲ್ಲಿ ನಾರಾಯಣ ತೊಡಗಿಸಿಕೊಂಡಿದ್ದರು. ಅವರ ಮಗ ಬಲರಾಮ ಅವರು ಲಾಂಚ್’ನಲ್ಲಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಕೆಲಸ ಮುಗಿಸಿ, ಮನೆಗೆ ದಿನಸಿ ಖರೀದಿ ಮಾಡಿಕೊಂಡು ಇಬ್ಬರು ತುಮರಿಯಿಂದ ಕಳಸವಳ್ಳಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ 108 ಆಂಬುಲೆನ್ಸ್ ಇದ್ದಿದ್ದರೆ ನೇರವಾಗಿ ಕುಂದಾಪುರ ಅಥವಾ ಮಂಗಳೂರಿಗೆ ನಾರಾಯಣ ಅವರು ನೇರವಾಗಿ ಕರೆದೊಯ್ಯಬಹುದಾಗಿತ್ತು. ತುರ್ತು ಚಿಕಿತ್ಸೆ ಲಭಿಸುವ ಸಾಧ್ಯತೆ ಇತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ನವಜಾತ ಶಿಶುವೊಂದು ಕಳೆದ ರಾತ್ರಿ ಅಸುನೀಗಿದೆ. ಅದರ ಕಂಪ್ಲೀಟ್ ಮಾಹಿತಿ ಓದಲು ಲಿಂಕ್ ಕ್ಲಿಕ್ ಮಾಡಿ | ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ