ಶಿವಮೊಗ್ಗ ಲೈವ್.ಕಾಂ | BHADRAVATHI / SHIMOGA NEWS | 27 ನವೆಂಬರ್ 2021
ಪಾನಿಪೂರಿ ಸೇವಿಸಿ ಮಕ್ಕಳು ಸೇರಿ ಹಲವರು ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿಯ ಅಪ್ಪರ್ ಹುತ್ತಾದಲ್ಲಿ ಘಟನೆ ಸಂಭವಿಸಿದೆ. ನಿತ್ಯ ಗಾಡಿಯಲ್ಲಿ ವ್ಯಕ್ತಿಯೊಬ್ಬ ಮನೆ ಬಳಿಗೆ ಪಾನಿಪೂರಿ ಮಾರಾಟ ಮಾಡಿಕೊಂಡು ಬರುತ್ತದ್ದ. ಆತನ ಬಳಿ ಮಕ್ಕಳು, ಮಹಿಳೆಯರು ಸೇರಿ ಹಲವರು ಆತನಿಂದ ಪಾನಿಪೂರಿ ಖರೀದಿಸಿ ಸೇವಿಸಿದ್ದಾರೆ. ಶುಕ್ರವಾರ ಘಟನೆ ಸಂಭವಿಸಿದೆ.
ದೂರು ನೀಡಲು ಹಿಂದೇಟು
ಪಾನಿಪೂರಿ ಸೇವಿಸಿದ ಮರುದಿನ ಹಲವರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಈ ಬೆಳವಣಿಗೆಯಾದರೂ ಪಾನಿಪೂರಿ ಮಾರಾಟಗಾರನ ವಿರುದ್ಧ ಯಾರೊಬ್ಬರು ದೂರು ನೀಡಿಲ್ಲ. ಹಾಗಾಗಿ ತಾಲೂಕು ಆಡಳಿತಕ್ಕಾಗಲಿ, ಆರೋಗ್ಯ ಇಲಾಖೆಗಾಗಲಿ ಯಾವುದೆ ಮಾಹಿತಿ ಇಲ್ಲವಾಗಿದೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ರಸ್ತೆ ಬದಿ ತಿನಿಸು, ಇರಲಿ ಎಚ್ಚರಿಕೆ
ಇತ್ತೀಚೆಗೆ ಮದುವೆ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಹಲವರು ಅಸ್ವಸ್ಥರಾಗಿದ್ದರು. ಈ ಪ್ರಕರಣದ ಬೆನ್ನಿಗೆ ಪಾನಿಪೂರಿ ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ. ರಸ್ತೆ ಬದಿ ತಿನಿಸುಗಳನ್ನು ಸೇವಿಸುವ ಮೊದಲು ಜನರು ಎಚ್ಚರ ವಹಿಸಬೇಕಿದೆ.