ಶಿವಮೊಗ್ಗ ಲೈವ್.ಕಾಂ | SHIMOGA NEWS | 24 MARCH 2021
ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ನಿಲ್ದಾಣದೊಳಗೆ ಮತ್ತು ರೈಲಿನಲ್ಲಿ ಪ್ಲಾಸ್ಟಿಕ್ ಕೊಂಡೊಯ್ಯುವವರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ಗಳನ್ನು ವಿತರಿಸಲಾಗಿದೆ.
ಪ್ಲಾಸ್ಟಿಕ್ ಕವರ್ , ಬ್ಯಾನರ್, ಶೀಟ್, ಪ್ಲಾಸ್ಟಿಕ್ ಧ್ವಜ, ಕಪ್, ಪ್ಲೇಟ್, ಸ್ಪೂನ್, ಥರ್ಮಕೋಲ್ ಸೇರಿದಂತೆ ಪ್ಲಾಸ್ಟಿಕ್ನಿಂದ ತಯಾರಿಸಿರುವ ವಸ್ತುಗಳನ್ನು ರೈಲು ನಿಲ್ದಾಣದ ಒಳಗೆ ಬಿಡದಿರಲು ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿವಮೊಗ್ಗ, ಸಾಗರದಲ್ಲಿ ಬಟ್ಟೆ ಬ್ಯಾಗ್
ಜಾಗೃತಿ ಆರಂಭಿಸಿರುವ ರೈಲ್ವೆ ಇಲಾಖೆ ಸಿಬ್ಬಂದಿಗಳು, ಮೈಸೂರು ವಿಭಾಗದ ಹಲವು ಕಡೆ ಬಟ್ಟೆ ಬ್ಯಾಗ್ ವಿತರಿಸಿದ್ದಾರೆ. ಪ್ಲಾಸ್ಟಿಕ್ ಕವರ್, ಬ್ಯಾಗ್ ತಂದಿದ್ದವರಿಗೆ ಪ್ಲಾಸ್ಟಿಕ್ ಬಳಸದಂತೆ ತಿಳಿವಳಿಕೆ ಮೂಡಿಸಿ, ಬಟ್ಟೆ ಬ್ಯಾಗ್ ವಿತರಿಸಲಾಗಿದೆ. ಶಿವಮೊಗ್ಗ ಮತ್ತು ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಬಟ್ಟೆ ವಿತರಿಸಲಾಗಿದೆ.
2300 ಪ್ರಯಾಣಿಕರ ಪರಿಶೀಲನೆ
ಕಳೆದ ವಾರ ಮೈಸೂರು ವಿಭಾಗದಲ್ಲಿ ಸುಮಾರು 2300 ಪ್ರಯಾಣಿಕರನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 400 ಪ್ರಯಾಣಿಕರು ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿದ್ದದ್ದು ಬೆಳಕಿಗೆ ಬಂದಿವೆ. ಈ ಪ್ರಯಾಣಿಕರಿಗೆ ರೈಲ್ವೆ ಟಿಟಿ, ಸೆಕ್ಯೂರಿಟಿ ಮತ್ತು ಹೆಲ್ತ್ ಇನ್ಸ್ಪೆಕ್ಟರ್ಗಳು ಜಾಗೃತಿ ಮೂಡಿಸಿದ್ದಾರೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗೃತಿ ಬಳಿಕ ದಂಡ ಪ್ರಯೋಗ
ಎರಡು ತಿಂಗಳು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಆ ಬಳಕೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ವಸ್ತುಗಳು, ಥರ್ಮಕೋಲ್ಗಳನ್ನು ರೈಲು ನಿಲ್ದಾಣದೊಳಗೆ ಕೊಂಡೊಯ್ಯುವ ಪ್ರಯಾಣಿಕರಿಗೆ, ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]