SHIVAMOGGA LIVE NEWS | 26 NOVEMBER 2022
SHIMOGA | ಶರಾವತಿ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ ನ್ಯಾಯ ಒದಗಿಸಬೇಕು ಎಂದು ಜೆಡಿಎಸ್ ನಾಯಕಿ ಶಾರದ ಪೂರ್ಯಾನಾಯ್ಕ್ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾರದಾ ಪೂರ್ಯಾನಾಯ್ಕ್ ಅವರು, ಪರಿಸರವಾದಿ ಗಿರೀಶ್ ಆಚಾರ್ ಅವರ ಅರ್ಜಿಯಿಂದ ಸಂತ್ರಸ್ಥರ ಬದುಕು ಅತಂತ್ರವಾಗಿದೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕಿತ್ತು. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ಈಗ ಸಂತ್ರಸ್ಥರ ಅಸಹಾಯಕತೆಯನ್ನು ರಾಜಕೀಯ ಧಾಳವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶರಾವತಿ ಸಂತ್ರಸ್ಥರಿಗೆ ಸಮಸ್ಯೆ ಆಗಬಾರದು ಎಂದು ಕಾಗೋಡು ತಿಮ್ಮಪ್ಪ ಅವರು ಭದ್ರತೆ ಒದಗಿಸುವ ಪ್ರಯತ್ನ ಮಾಡಿದ್ದರು. ಹಕ್ಕು ಪತ್ರವನ್ನು ನೀಡಿದ್ದರು. ಆದರೆ ಮುಂದೆ ಬಂದ ಸರ್ಕಾರ ಸಂತ್ರಸ್ಥರ ಪರವಾಗಿ ನಿಲ್ಲಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಗಿಮಿಕ್ ಮಾಡಿ, ಸಮಾವೇಶ ಮಾಡುವುದರಿಂದ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೆ ಇದೆ. ಈಗಲು ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಬಹುದು. ಈ ಬಗ್ಗೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಶಾರದಾ ಪೂರ್ಯಾನಾಯ್ಕ್ ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸತೀಶ್, ಬಸಪ್ಪ ಗೌಡ, ಸತೀಶ್, ಸುರೇಶ್, ಪ್ರದೀಪ್ ಪುರದಾಳು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.