ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ನವೆಂಬರ್ 2021
ಪಕ್ಷ ಬಿ-ಫಾರಂ ನೀಡಿದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಅವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬಂದು ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್.ಪ್ರಸನ್ನಕುಮಾರ್ ಅವರು ನಾಮಪತ್ರ ಸಲ್ಲಿಸಿದರು. ಭದ್ರಾವತಿ ಶಾಸಕ ಸಂಗಮೇಶ್ವರ್, ಮಾಜಿ ಶಾಸಕ ಶಾಂತನಗೌಡ ಅವರು ಪ್ರಸನ್ನಕುಮಾರ್ ಅವರಿಗೆ ಸೂಚಕರಾಗಿ ನಾಮಪತ್ರ ಸಲ್ಲಿಸಿದರು.
‘ಸದಸ್ಯರ ವಿಶ್ವಾಸ ಗಳಿಸಿದ್ದೇನೆ’
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರು, ಇವತ್ತಿನಿಂದ ನಾನು ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ನಮ್ಮ ನಾಯಕರು ಡಿ.ಕೆ.ಶಿವಕಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಮುಖಂಡರು ಅಧಿಕಾರದಲ್ಲಿ ಇಲ್ಲದಿದ್ದರೂ, ಜನರನ್ನು ಸೆಳೆಯಲು ಶಕ್ತಿವಂತರಾಗಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಇದ್ದರೂ ಪ್ರಭಾವ ಬೀರುವಂತಹ ಶಕ್ತಿ ಹೊಂದಿಲ್ಲ. ಪ್ರತಿ ಸದಸ್ಯನ ಜೊತೆಗೂ ಸಂಪರ್ಕ ಇಟ್ಟುಕೊಂಡಿದ್ದೇನೆ. ವಿಶ್ವಾಸ ಗಳಿಸಿದ್ದೇನೆ. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನದೆ ಗೆಲುವಾಗಲಿದೆ ಎಂದರು.
‘ಸೂರ್ಯ, ಚಂದ್ರರಷ್ಟೆ ಸತ್ಯ ಕಾಂಗ್ರೆಸ್ ಗೆಲುವು’
ಭದ್ರಾವತಿ ಶಾಸಕ ಸಂಗಮೇಶ್ವರ್ ಮಾತನಾಡಿ, ಆರ್.ಪ್ರಸನ್ನಕುಮಾರ್ ಅವರು ಕಳೆದ ಭಾರಿ ವಿಧಾನ ಪರಿಷತ್’ಗೆ ಆಯ್ಕೆ ಮಾಡಿದ್ದರು. ಆರು ವರ್ಷದ ಅವಧಿಯಲ್ಲಿ ಹೆಚ್ಚು ಅನುದಾನ ತಂದಿದ್ದಾರೆ. ಅದರ ಅನುಭವದ ಆಧಾರದಲ್ಲಿ ಮತ್ತು ಸಮಾಜ ಮುಖಿ ಕಾರ್ಯಗಳಿಂದಾಗಿ ಅವರು ಪುನರಾಯ್ಕೆಯಾಗಲಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಬರುವ ಮುನ್ಸೂಚನೆ ಇದೆ. ಹಾಗಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೆ ನಮ್ಮ ಗೆಲುವು ಕೂಡ ಅಷ್ಟೆ ಸತ್ಯ ಎಂದರು.
‘ಬಿಜೆಪಿ ಸದಸ್ಯರೂ ನಮ್ಮನ್ನು ಬೆಂಬಲಿಸ್ತಾರೆ’
ಮಾಜಿ ಶಾಸಕ ಶಾಂತನಗೌಡ ಮಾತನಾಡಿ, ನಮ್ಮ ಅಭ್ಯರ್ಥಿ ಉತ್ತಮ ಕೆಲಸ ಮಾಡಿ, ಸಾರ್ವಜನಿಕರ ಸಂಪರ್ಕ ಹೊಂದಿದ್ದಾರೆ. ಮೂರೂವರೆ ವರ್ಷವಾದರೂ ಈ ಸರ್ಕಾರ ಒಂದೇ ನಿವೇಶನ ಕೊಟ್ಟಿಲ್ಲ, ಸರಿಯಾಗಿ ಅನುದಾನ ಕೊಟ್ಟಿಲ್ಲ. ಬಹಳ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿಗೆ ಹೋಗಿದ್ದರು. ಆದರೆ ಅವರ ಆಶಯಗಳೆಲ್ಲವೂ ನಿರಾಸೆಯಾಗಿದೆ. ಅವರೆಲ್ಲರೂ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಹಲವರು ಈ ಸಂದರ್ಭ ಹಾಜರಿದ್ದರು.