SHIVAMOGGA LIVE NEWS | 26 APRIL 2023
BHADRAVATHI : ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ (Prisoner) ಪೊಲೀಸ್ ಭದ್ರತೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಶಿವಮೊಗ್ಗದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರ ಆದೇಶದ ಮೇರೆಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಏನಿದು ಪ್ರಕರಣ?
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನನ್ನು ಬಂಧಿಸಲಾಗಿದೆ (Prisoner). ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ. ನ್ಯಾಯಾಧೀಶರ ಆದೇಶದ ಮೇರೆಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಡಿಎಆರ್ ಸಿಬ್ಬಂದಿ ಬೆಂಗಾವಲಿನಲ್ಲಿ ಯುವಕ ಜೈಲಿನಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ದೂರಿನಲ್ಲಿ ಏನಿದೆ?
ಯುವಕ ತನ್ನದೆ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಿಂದ ಯುವತಿಯು ಓಡಿ ಹೋಗೋಣ ಎಂದು ತಿಳಿಸಿದ್ದಳು. ಇದಕ್ಕೆ ಒಪ್ಪದ ಯುವಕ ಮನೆಯವರಿಗೆ ವಿಚಾರ ತಿಳಿಸುವಂತೆ ಹೇಳಿದ್ದ. ಅಂತೆಯೆ ಯುವತಿ ಮನೆಯಲ್ಲಿ ವಿಷಯ ತಿಳಿಸಿದ್ದಳು. ಯುವತಿ ತಾಯಿ, ಯುವಕ ಮತ್ತು ಆತನ ತಾಯಿಗೆ ಫೋನ್ ಮೂಲಕ ಮಾತನಾಡಿ ಬೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಸೊಳ್ಳೆ ಬತ್ತಿ ತರಲು ಹೋಗಿದ್ದಾಗ ಕಿರಿಕ್, ಯುವಕನ ಕೈಗೆ ಚಾಕುವಿನಿಂದ ಹಲ್ಲೆ ಆರೋಪ, ದೂರು, ಪ್ರತಿದೂರು ದಾಖಲು
ಸ್ವಲ್ಪ ದಿನದ ಬಳಿಕ ಯುವತಿಯ ಚಿಕ್ಕಪ್ಪ ಎಂದು ಒಬ್ಬ ವ್ಯಕ್ತಿ ಫೋನ್ ಮಾಡಿ, ಮಾತನಾಡಬೇಕು ಬನ್ನಿ ಎಂದು ಯುವಕ ಮತ್ತು ಆತನ ತಾಯಿಯನ್ನು ಕರೆಯಿಸಿಕೊಂಡಿದ್ದಾರೆ. ನಿಗದಿತ ಸ್ಥಳಕ್ಕೆ ಹೋಗಿದ್ದಾಗ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. 8 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಆ ದಿನ ಅಲ್ಲಿಗೆ ಬಂದಿದ್ದವರಲ್ಲಿ ಇಬ್ಬರು ತಮ್ಮನ್ನು ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಅಪಘಾತದಿಂದ ಮಿದುಳು ನಿಷ್ಕ್ರಿಯ, ಭದ್ರಾವತಿ ಯುವಕನ ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೇರಿ ಅಂಗಾಂಗ ದಾನ
ಮೂರು ದಿನದೊಳಗೆ ಹಣ ಕೊಡದೆ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ಹಣ ಕೊಡದೆ ಇದ್ದಾಗ ಯುವತಿ ಕಡೆಯಿಂದ ದೂರು ಕೊಡಿಸಿ ಜೈಲಿಗೆ ಹಾಕಿಸಿದ್ದಾರೆ. ಯುವತಿ ಚಿಕ್ಕಪ್ಪ, ಯುವತಿ, ಯುವತಿಯ ತಂದೆ, ತಾಯಿ, ಅವರ ಜೊತೆಗೆ ಬಂದಿದ್ದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವಕರ ಭದ್ರಾವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ.