ಶಿವಮೊಗ್ಗ ಲೈವ್.ಕಾಂ | SAGARA NEWS | 18 ನವೆಂಬರ್ 2021
ನಟಿ ಕಂಗನಾ ರಣಾವತ್ ಹೇಳಿಕೆಗೆ ಸಾಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಮತ್ತು ಆಕೆಯನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.
ಸಾಗರದ ಉಪ ವಿಭಾಗೀಯ ಕಚೇರಿ ಮುಂದೆ ಜನಮನ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟಿ ಕಂಗನಾ ಬಂಧನಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
‘ಅತಿರೇಕದ ಪರಮಾವಧಿ, ಯಾರನ್ನೋ ಮೆಚ್ಚಿಸಲು ಯತ್ನ’
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ನಾ.ಡಿಸೋಜಾ, ‘1947ರಲ್ಲಿ ನಮಗೆ ದೊರೆತಿದ್ದು ಸ್ವಾತಂತ್ರ್ಯದ ಭಿಕ್ಷೆಯಷ್ಟೆ. ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ನಟಿ ಕಂಗನಾ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ಬಲಿದಾನಗೈದಿದ್ದಾರೆ. ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲದೆ ನಟಿ ಕಂಗನಾ ಹೇಳಿಕೆ ನೀಡಿದಂತೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಈ ಹೇಳಿಕೆಯು ಅತಿರೇಕದ ಪರಮಾವಧಿಯಾಗಿದೆ. ಯಾರನ್ನೋ ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಜನಮನ ಸಂಘಟನೆ ಸಂಚಾಲಕ ಡಿ.ದಿನೇಶ್, ಸಾಹಿತಿ ವಿಲಿಯಂ, ನಗರಸಭೆ ಸದಸ್ಯೆ ಎನ್.ಲಲಿತಮ್ಮ, ಪ್ರಮುಖರಾದ ಮೊಹಮ್ಮದ್ ಖಾಸಿಂ, ಕೆ.ಸಿದ್ದಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಹಾಜರಿದ್ದರು.