SHIVAMOGGA LIVE NEWS | 21 FEBRURARY 2023
SHIMOGA : ವಿಮಾನ ನಿಲ್ದಾಣ ಪಕ್ಕದಲ್ಲಿ ಮನಸೋಯಿಚ್ಛೆ ಬಡಾವಣೆಗಳ (Layout) ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪಕ್ಕದ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸದೆ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೆ ಕಾರಣಕ್ಕೆ ಗ್ರಾಮಸ್ಥರು ಇಡೀ ದಿನ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಪಕ್ಕದಲ್ಲೆ ಇರುವು ಕೊರ್ಲಹಳ್ಳಿ ಕಾಚಿನಕಟ್ಟೆ ಅವಳಿ ಗ್ರಾಮಗಳ ಜನರು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಪಟ್ಟು ಹಿಡಿದರು.
ಮನಸೋಯಿಚ್ಛೆ ಬಡಾವಣೆ ನಿರ್ಮಾಣ
ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ಸುತ್ತಮುತ್ತಲು ತೋಟ, ಗದ್ದೆಗಳನ್ನು ಬಡಾವಣೆಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಐದಾರು ವರ್ಷದಿಂದ ಈಚೆಗೆ 8 ಬಡಾವಣೆಗಳು ನಿರ್ಮಾಣವಾಗಿದ್ದು 450 ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಕೆಲವು ಮನೆಗಳು ಕೂಡ ನಿರ್ಮಾಣವಾಗಿದೆ. ಬಡಾವಣೆ ನಿರ್ಮಿಸಲು ಇನ್ನಷ್ಟು ತೋಟ, ಗದ್ದೆ ಖರೀದಿಸಲಾಗಿದೆ. ಕೆಲವೇ ವರ್ಷದಲ್ಲಿ ಮತ್ತಷ್ಟು ನಿವೇಶನ ಸಿದ್ಧವಾಗಲಿದೆ. ಆದರೆ ಅಧಿಕಾರಿಗಳು ಬಡಾವಣೆ ನಿರ್ಮಾಣಕ್ಕೆ ಮನಸೋಯಿಚ್ಛೆ ಅನುಮತಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲ ಸೌಕರ್ಯವಿಲ್ಲ
ಕೊರ್ಲಹಳ್ಳಿ – ಕಾಚಿನಕಟ್ಟೆ ಗ್ರಾಮಗಳು ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಇದ್ದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಸರಿಯಾದ ಸಂಪರ್ಕ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ. ಇದ್ಯಾವುದನ್ನು ಸರಿಪಡಿಸದೆ ಬಡಾವಣೆಗಳಿಗೆ ಅನುಮತಿ ನೀಡುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಇಡೀ ದಿನ ಪ್ರತಿಭಟನೆ
ಬಡಾವಣೆಗಳಿಗೆ ಮನಸೋಯಿಚ್ಛೆ ಅನುಮತಿ ನೀಡುತ್ತಿರುವುದು, ಮೂಲ ಸೌಕರ್ಯ ಒದಗಿಸದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇರಿಸಿಕೊಂಡು ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.
ಇದನ್ನೂ ಓದಿ – ವಿಮಾನ ನಿಲ್ದಾಣದ ಮುಂದೆ ದನ, ಕರುಗಳನ್ನು ಕರೆದೊಯ್ದು ಕುಟುಂಬ ಸಹಿತ ಪ್ರತಿಭಟನೆಗೆ ಸಜ್ಜಾದ ರೈತರು
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್, ಮಾಜಿ ಸದಸ್ಯ ಕೆ.ಪಿ.ವಿಶ್ವನಾಥ್, ಪ್ರದೀಪ್, ವಸಂತ, ವಹಿಳೆಯರು ಮತ್ತು ಮಕ್ಕಳು ಪ್ರತಿಭಟನೆಯಲ್ಲಿ ಭಾಗಹಿಸಿದ್ದರು.