ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2021
ಕಳೆದ ಮೂರು ದಿನದಿಂದ ಶಿವಮೊಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ವರ್ಷಧಾರೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೊಳೆ, ಹಳ್ಳ, ಕೊಳ್ಳಗಳಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 18 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 48.20 ಮಿ.ಮೀ, ತೀರ್ಥಹಳ್ಳಿಯಲ್ಲಿ 79.60 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ, ಶಿಕಾರಿಪುರದಲ್ಲಿ 27 ಮಿ.ಮೀ, ಸೊರಬದಲ್ಲಿ 29.20 ಮಿ.ಮೀ, ಹೊಸನಗರದಲ್ಲಿ 142.40 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 59.31 ಮಿ.ಮೀ ಮಳೆಯಾಗಿದೆ.
ಮಳೆ ಪ್ರಮಾಣ ಹೆಚ್ಚಳ ಆಗಿರುವುದರಿಂದ ನದಿಗಳ ನೀರಿನ ಹರಿವು ಹೆಚ್ಚಳವಾಗಿದೆ. ಜಲಾಶಯಗಳ ಒಳ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 33,331 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಜಲಯಾಶಯದ ನೀರಿನ ಮಟ್ಟ 1786.05 ಅಡಿಗೆ ಏರಿಕೆಯಾಗಿದೆ.
ಭದ್ರಾ ಜಲಾಶಯಕ್ಕೆ 7646 ಕ್ಯೂಸೆಕ್ ನೀರು ಒಳಹರಿವು ಇದೆ. ಸದ್ಯ ಡ್ಯಾಂನಲ್ಲಿ 157.40 ಮೀಟರ್ ನೀರಿನ ಸಂಗ್ರಹವಿದೆ. ಇನ್ನು ತುಂಗಾ ಜಲಾಶಯಕ್ಕೆ 11,456 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ರೈತರ ಮೊಗದಲ್ಲಿ ಮಂದಹಾಸ
ಕಳೆದ ಮೂರು ದಿನದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಜೋಳ, ಶುಂಠಿ, ಭತ್ತದ ನಾಟಿ ಮಾಡಿದ್ದ ರೈತರು ಮಳೆಗಾಗಿ ಕಾದು ಕೂತಿದ್ದರು. ಹದಿನೈದು ದಿನಕ್ಕೂ ಹೆಚ್ಚು ಕಾಲ ಮಳೆ ಇಲ್ಲದ್ದರಿಂದ ಬೆಳ ಒಣಗುವ ಭೀತಿ ಇತ್ತು. ಈಗ ಮಳೆಯಾಗಿರುವುದರಿಂದ ರೈತರು ನಿರಮ್ಮಳರಾಗಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200