ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮಾರ್ಚ್ 2021
ಬೆಳಗಾವಿ ಅಧಿವೇಶನಕ್ಕೆ ಬರುವ ಶಾಸಕರು ಗೋವಾಗೆ ಹೋಗಬಾರದು ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಶೇಖರ ಮುಲಾಲಿ, ಅಧಿವೇಶನಕ್ಕೆ ಬರುವ ಶಾಸಕರು ಸಮಯ ಇದೆ ಎಂದು ಗೋವಾಗೆ ಹೋಗುತ್ತಾರೆ.ಆ ರೀತಿ ಹೋಗಬಾರದು. ಮುಂದೆ ಸಮಸ್ಯೆ ಆಗಬಹುದು ಎಂದರು.
ನನ್ನ ಹತ್ರ ಸಿಡಿ ಇಲ್ಲ
ನನ್ನ ಬಳಿ 19 ಸಿಡಿಗಳಿವೆ ಎಂದು ಎಲ್ಲಿಯೂ ಹೇಳಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಈ ಸಂಬಂಧ ಮಹಿಳೆಯೊಬ್ಬರು ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ವಾಟ್ಸಪ್ ಮೂಲಕ ನೊಟೀಸ್ ನೀಡಿದ್ದಾರೆ ಎಂದು ತಿಳಿಸಿದರು.
ಜಾರಕಿಹೊಳಿ ವಿರುದ್ಧ ಷಡ್ಯಂತ್ರ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ರಾಜಶೇಖರ ಮುಲಾಲಿ, ಸಿಡಿ ವಿಚಾರ ದೊಡ್ಡ ಷಡ್ಯಂತ್ರ. ರಮೇಶ್ ಜಾರಕಿಹೊಳಿ ಅವರ ವಿರುದ್ಧ ಈ ಷಡ್ಯಂತ್ರ ನಡೆದಿದೆ. ಇದರ ವಿರುದ್ಧ ತನಿಖೆ ನಡೆಯಬೇಕಿದೆ ಎಂದರು.
ದನ ಕಾಯೋನೂ ಮಾಹಿತಿ ಕೇಳಬಹುದು
ಹಾದಿ ಬೀದಿಯಲ್ಲಿ ಹೋಗುವವರು ಆರ್ಟಿಐ ಮೂಲಕ ಮಾಹಿತಿ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ಸದನದಲ್ಲಿ ಹೇಳಿದ್ದಾರೆ. ಹಾದಿ, ಬೀದಿಯಲ್ಲಿ ಹೋಗುವವರು ಮಾತ್ರವಲ್ಲ, ದನ ಕಾಯುವವರು, ಅನಕ್ಷರಸ್ಥರು ಕೂಡ ಮಾಹಿತಿ ಕೇಳಬಹುದು. ಅದಕ್ಕೆ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.