ಶಿವಮೊಗ್ಗದ ಲೈವ್.ಕಾಂ | SHIMOGA NEWS | 26 ಡಿಸೆಂಬರ್ 2021
ಚಿನ್ನಾಭರಣ ಹೊಳೆಯುವಂತೆ ಮಾಡುವುದಾಗಿ ನಂಬಿಸಿ, ವಂಚಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಶಿವಮೊಗ್ಗ ತಾಲೂಕು ಹಾರನಹಳ್ಳಿ ಕೋಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸೀತಮ್ಮ (72) ಎಂಬುವವರ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ.
ಕೆಂಪು ಪೌಡರ್ ಹಚ್ಚಿ ಯಾಮಾರಿಸಿದರು
ಶನಿವಾರ ಮಧ್ಯಾಹ್ನ ಸೀತಮ್ಮ ಅವರ ಮನೆ ಬಳಿಗೆ ಬಂದ ಇಬ್ಬರು ಅಪರಿಚಿತರು, ಮನೆಯಲ್ಲಿರುವ ದೇವರ ವಸ್ತುಗಳನ್ನು ಸ್ವಚ್ಛ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಸೀತಮ್ಮ ಅವರು ತಂದು ಕೊಟ್ಟ ದೇವರ ಪೂಜಾ ಸಾಮಗ್ರಿಯೊಂದಕ್ಕೆ, ಕೆಂಪು ಬಣ್ಣದ ಪೌಡರ್ ಹಾಕಿ, ಪಳಪಳ ಹೊಳೆಯುವಂತೆ ಮಾಡಿ ಕೊಟ್ಟಿದ್ದಾರೆ. ಇದರಿಂದ ಖುಷಿಯಾದ ಸೀತಮ್ಮ ಅವರಿಗೆ, ‘ಮನೆಯಲ್ಲಿರುವ ಚಿನ್ನಾಭರಣಗಳನ್ನು ಕೊಟ್ಟರೆ ಇದೆ ರೀತಿ ಹೊಳೆಯುವಂತೆ ಮಾಡಿಕೊಡುವುದಾಗಿ’ ತಿಳಿಸಿದ್ದಾರೆ.
ವಂಚಕರ ಮಾತು ನಂಬಿದ ಸೀತಮ್ಮ ಅವರು, ತಮ್ಮ 80 ಗ್ರಾಂ ತೂಕದ ಮಾಂಗಲ್ಯ ಸರ ಕೊಟ್ಟಿದ್ದಾರೆ. ಬಳಿಕ, ಒಂದು ಸ್ಟೀಲ್ ಬಾಕ್ಸ್ ತಂದು ಕೊಡುವಂತೆ ಕೇಳಿದ ವಂಚಕರು, ಅದಕ್ಕೆ ನೀರು ಹಾಕಿ, ಕೆಂಪು ಪುಡಿಯ ಸುರಿದರು. ಮಾಂಗಲ್ಯ ಸರವನ್ನು ಬಾಕ್ಸ್ ಒಳಗೆ ಹಾಕಿ ಸ್ವಚ್ಛಗೊಳಿಸುವಂತೆ ನಟಿಸಿದರು. ಇದನ್ನು ಕುದಿಸಬೇಕು ಎಂದು ಕೇಳಿದರು.
ಸೀತಮ್ಮ ಅವರು ಅಪರಿಚಿತರ ಪೈಕಿ ಒಬ್ಬನನ್ನು ತಮ್ಮ ಅಡುಗೆ ಮನೆಗೆ ಕರೆದೊಯ್ದು, ಗ್ಯಾಸ್ ಸ್ಟೌ ಮೇಲೆ ಬಾಕ್ಸ್ ಇರಿಸಿ ಕುದಿಸಿದರು. ನೀರು ಬಿಸಿ ಆರಿದ ಮೇಲೆ ಚಿನ್ನದ ಸರವನ್ನು ಹೊರಗೆ ತೆಗೆಯಿರಿ ಎಂದು ತಿಳಿಸಿ, ಆ ಇಬ್ಬರು ವಂಚಕರು ಮನೆಯಿಂದ ತೆರಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಸೀತಮ್ಮ ಅವರು ಬಾಕ್ಸ್’ನಲ್ಲಿದ್ದ ಕೆಂಪು ನೀರಿನ ಒಳಗೆ ಕೈ ಹಾಕಿ ಪರಿಶೀಲಿಸಿದಾಗ ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಅಕ್ಕಪಕ್ಕದವರಿಗೆ ಮಾಹಿತಿ
ಆತಂಕಗೊಂಡ ಸೀತಮ್ಮ ಅವರು ಚಿನ್ನದ ಸರ ಕಳ್ಳತನವಾಗಿರುವ ಕುರಿತು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಎಲ್ಲರೂ ಸೇರಿ ಹುಡುಕಿದ್ದಾರೆ. ವಂಚಕರು ಎಲ್ಲಿಯೂ ಸಿಗದ ಹಿನ್ನೆಲೆ, ತಮ್ಮ ಕುಟುಂಬದೊಂದಿಗೆ ಬಂದ ಸೀತಮ್ಮ ಅವರು ಕುಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.