SHIVAMOGGA LIVE NEWS | 13 JANUARY 2023
SAGARA : ವಕೀಲರೊಬ್ಬರ ಹೆಸರ ದುರ್ಬಳಕೆ ಮಾಡಿಕೊಂಡು, ಅವರ ಸಹಿಯನ್ನು ನಕಲು ಮಾಡಿ ಮಾಹಿತಿ ಹಕ್ಕು (Right To Information) ಮೂಲಕ ಮಾಹಿತಿ ಕೇಳಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರದ ವಕೀಲ ಪ್ರವೀಣ್ ಅವರ ಹೆಸರು, ಸಹಿಯನ್ನು ದುರ್ಬಳಕೆ ಮಾಡಿಕೊಂಡು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಲಾಗಿದೆ.
ವಿಷಯ ಗೊತ್ತಾಗಿದ್ದು ಹೇಗೆ?
ವಕೀಲ ಪ್ರವೀಣ್ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ 2 ಆರ್.ಟಿ.ಐ (Right To Information) ಅರ್ಜಿ ಸಲ್ಲಿಕೆಯಾಗಿತ್ತು. ತಾಂತ್ರಿಕ ಕಾರಣದಿಂದ ಈ ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯದ ಕುಲ ಸಚಿವರು ಪ್ರವೀಣ್ ಅವರಿಗೆ ಹಿಂಬರಹ ಕಳುಹಿಸಿದ್ದರು. ಶೀಘ್ರ ಅಂಚೆ ಮೂಲಕ ಬಂದಿದ್ದ ಹಿಂಬರಹ ಕಂಡು ವಕೀಲ ಪ್ರವೀಣ್ ಅವರು ಚಕಿತಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಾರ್ಟಿ ವೇಳೆ ಭದ್ರಾವತಿಯ ನಾಲ್ವರಿಗೆ ಬಿಯರ್ ಬಾಟಲಿಗಳಿಂದ ಹೊಡೆದು ಹಲ್ಲೆ
ತಮ್ಮ ಹೆಸರು, ಸಹಿ ಮತ್ತು ವೃತ್ತಿಯನ್ನು ದುರ್ಬಳಕೆ ಮಾಡಿಕೊಂಡು ವಿಶ್ವವಿದ್ಯಾಲಯದಿಂದ ದಾಖಲೆಗಳನ್ನು ಪಡೆದು, ಬ್ಲಾಕ್ ಮೇಲ್ ಮಾಡುವ ತಂತ್ರ ಅನುಸರಿಸಿರುವ ಶಂಕೆ ಇದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.