SHIVAMOGGA LIVE NEWS | SHIMOGA CITY | 06 ಮೇ 2022
ಭಾರತದಲ್ಲಿ ಹಲವು ಪಂಥಗಳು, ಟೀಕೆ ಟಿಪ್ಪಣಿ, ಗೊಂದಲಗಳಿಂದ ಹಿಂದೂ ಸಮಾಜ ನಲುಗಿ ಹೋಗಿದ್ದ ಸಂದರ್ಭ ವೈದಿಕ ಸಂಪ್ರದಾಯಗಳನ್ನು ಗಟ್ಟಿಗೊಳಿಸಿದವರು ಶಂಕರಾಚಾರ್ಯರು ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು, ಜನಸಾಮಾನ್ಯರಿಗೆ, ಸಂಸಾರಿಗಳಿಗೆ ನಿಬಂಧನೆ ವಿಧಿಸದೆ ಸಾಮಾನ್ಯ ವ್ಯಕ್ತಿಗಳಿಗೆ ಸರಳವಾಗಿ ವೈದಿಕ ಸಂಪ್ರದಾಯವನ್ನು ತಿಳಿಯುವಂತೆ ಮಾಡಿದವರು ಶಂಕರಾಚಾರ್ಯರು. ವೈದಿಕ ಸಂಪ್ರದಾಯದಲ್ಲಿದ್ದ ದೋಷಗಳನ್ನು ತೊಡೆದು ಹಾಕಿದ ಬಗೆಯನ್ನು ನಾವುಗಳು ತಿಳಿಯಬೇಕು ಹಾಗೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ, ಮಹನೀಯರ ಜಯಂತಿ ಆಚರಿಸುವ ಮೂಲಕ ಅವರ ದಾರ್ಶನಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಎಲ್ಲರಲ್ಲಿ ಸಾಮರಸ್ಯ ಬೆಳೆಸುವುದು ಜಯಂತಿಗಳ ಉದ್ದೇಶ ಎಂದರು.
ಕೆಎಸ್ಎಸ್ಐಡಿಸಿ ಉಪಾಧ್ಯಕ್ಷ ದತ್ತಾತ್ರಿ ಎಸ್ ಮಾತನಾಡಿ, ವೈದಿಕ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುವವರ ಮನೆಯಲ್ಲಿ ಯಾವುದೇ ಲೋಭ ಮೋಹಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ಅವರು ಶ್ರಿ ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದರು. ಮಾಜಿ ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ ನಟರಾಜ ಭಾಗವತ್, ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಪಿ.ನಾರಾಯಣ್, ಪದ್ಮನಾಭ್ ರಾಮಭಟ್ಟರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಉಮೇಶ್, ಸಮಾಜದ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಹಳದಮ್ಮ ದೇವಿ ಜಾತ್ರೆ, ಸಿಡಿ ಉತ್ಸವ ಕಣ್ತುಂಬಿಕೊಳ್ಳಲು ಜನವೋ ಜನ