ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2021
ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಶಿವಮೊಗ್ಗದಲ್ಲಿ ಸುಮಾರು 35 ಕುರಿಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಸಂಚಲನ ಮೂಡಿಸಿದೆ.
ಶಿವಮೊಗ್ಗದ ಸಾಗರ ರಸ್ತೆಯ ಪಿಇಎಸ್ ಕಾಲೇಜು ಬಳಿ ಘಟನೆ ಸಂಭವಿಸಿದೆ. ಸಂಚಾರಿ ಕುರಿಗಾಹಿ ವಾಸಪ್ಪ ಮಾನಿ ಎಂಬುವವರಿಗೆ ಸೇರಿದು ಸುಮಾರು 35 ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿವೆ. ಎನ್ಟ್ರಿಯೋ ಟಾಕ್ಸಿನಿಯಾ ಎಂಬ ಕಾಯಿಲೆಗೆ ತುತ್ತಾಗಿ ಈ ಕುರಿಗಳು ಮೃತಪಟ್ಟಿವೆ ಎಂದು ಪಶು ಸಂಗೋಪನಾ ಇಲಾಖೆ ಮೂಲಗಳು ತಿಳಿಸಿವೆ.
ವಾಸಪ್ಪ ಮಾನಿ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಕುರಿಗಳನ್ನು ಮೇಯಿಸಿಕೊಂಡು ಶಿವಮೊಗ್ಗ ಜಿಲ್ಲೆಗೆ ಬಂದಿದ್ದರು. ಈ ವೇಳೆ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಕುರಿಗಳು ಮೃತಪಟ್ಟಿವೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. ತಮ್ಮ ಸರ್ಕಾರ ಇದ್ದ ಅವಧಿಯಲ್ಲಿ ಇಂತವರ ನೆರವಿಗಾಗಿಯೇ ‘ಅನುಗ್ರಹ’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.
‘ಕಂಬಳಿ ಹೊದ್ದು ಚುನಾವಣೆ ಪ್ರಚಾರ’
ಕುರಿಗಾಯಿಗಳ ಓಟಿನ ಬೇಟೆಗಾಗಿ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ. ನಿಮಗೆ ಕುರಿಗಾಯಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಗೆ ಹಣ ಒದಗಿಸಿ, ಪಶುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.