ಶಿವಮೊಗ್ಗ ಲೈವ್.ಕಾಂ | SHIKARIPURA NEWS | 29 ಜೂನ್ 2020
ಶಿಕಾರಿಪುರ ತಾಲೂಕಿನ ಹಲವು ಭಾಗಕ್ಕೆ ನೀರು ಒದಗಿಸುವ ಉಡುಗಣಿ – ತಾಳಗುಂದ ಏತ ನೀರಾವರಿ ಯೋಜನೆ ಕಾಮಗಾರಿಯನ್ನು, ಇವತ್ತು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲನೆ ನಡೆಸಿದರು. ಆ ಭಾಗದ ರೈತರನ್ನು ಕರೆಯಿಸಿ ಯೋಜನೆ ಕುರಿತು ಮಾಹಿತಿ ನೀಡಿದರು.
ಎಲ್ಲಿ ನಡೆಯುತ್ತಿದೆ ಯೋಜನೆ?
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಚಟ್ನಹಳ್ಳಿ ಗ್ರಾಮದಲ್ಲಿ ಜಾಕ್ ವೆಲ್ ನಿರ್ಮಾಣ ಕಾಮಗಾರಿಯನ್ನು ಸಂಸದ ರಾಘವೇಂದ್ರ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಜಾಕ್ ವೆಲ್ ನಿರ್ಮಿಸಿ ಇಲ್ಲಿಂದ ನೀರನ್ನು ಪಂಪ್ ಮಾಡಿ ಶಿಕಾರಿಪುರ ತಾಲೂಕಿನ 186 ಕೆರೆಗಳಿಗೆ ಒಟ್ಟಾರೆ 1.5 ಟಿಎಂಸಿ ನೀರನ್ನು ತುಂಬಿಸಲಾಗುತ್ತದೆ ಎಂದು ತಿಳಿಸಿದರು.
ಎಷ್ಟು ಎಕರೆ ಜಾಗಕ್ಕೆ ಅನುಕೂಲವಾಗುತ್ತೆ?
ಈ ಯೋಜನೆಯಿಂದ ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಮತ್ತು ತೊಗರ್ಸಿ ಭಾಗಕ್ಕೆ ನೀರು ಪೂರೈಕೆಯಾಗಲಿದೆ. ಇಲ್ಲಿನ 18 ಸಾವಿರ ಎಕರೆ ಜಮೀನಿಗೆ ನೀರು ಒದಗಿಸಲಾಗುತ್ತದೆ. ಇದರಿಂದ ಬರಗಾಲಪೀಡಿತ ಪ್ರದೇಶ ಎಂಬ ಅಪಖ್ಯಾತಿಯಿಂದ ಈ ಪ್ರದೇಶ ದೂರಾಗಲಿದೆ.
ಹೇಗೆ ಉಪಯೋಗ ಆಗಲಿದೆ?
ತುಂಗಭದ್ರ ನದಿಯಿಂದ ಜಾಕ್ ವೆಲ್ಗೆ ನೀರು ತುಂಬಿಸಿ, ಅಲ್ಲಿಂದ ಪೈಪ್ಗಳ ಮೂಲಕ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಇದರಿಂದ ಬೆಳೆ ಬೆಳೆಯಲು ಅನುಕೂಲ ಆಗಲಿದೆ. ಅಂತರ್ಜಲ ಮಟ್ಟವು ಹೆಚ್ಚಳವಾಗಬಹುದು ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]