ಶಿವಮೊಗ್ಗ ಲೈವ್.ಕಾಂ | SHIKARIPURA NEWS | 19 ಮೇ 2020
ಒಂದೆಡೆ ಕರೋನ ಆತಂಕ. ಮತ್ತೊಂದು ಕಡೆ ಸಾಮಾಜಿಕ ಅಂತರ ಪಾಲಿಸಬೇಕು ಎಂಬ ಕಟ್ಟಪ್ಪಣೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕರೊಬ್ಬರು ವಿಭಿನ್ನವಾಗಿ ಸಪ್ತಪದಿ ತುಳಿದಿದ್ದಾರೆ. ಇವರ ವಿವಾಹದ ಶೈಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೇಗಾಯ್ತು ಮದುವೆ?
ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ದರ್ಶನ್ ಉಳ್ಳಿ ಭದ್ರಾವತಿ ತಾಲೂಕು ಹೊನ್ನೆಹಟ್ಟಿಯ ಪ್ರತಿಮಾ ಅವರೊಂದಿಗೆ ಸೋಮವಾರ ವಿವಾಹವಾಗಿದ್ದಾರೆ. ಸರ್ಕಾರದ ಸೂಚನೆಯಂತೆ ಮದುವೆ ಸರಳವಾಗಿ ನೆರವೇರಿತು. ದರ್ಶನ್ ಅವರ ಮನೆ ಆವರಣದಲ್ಲಿಯೆ ಮದುವೆ ನಡೆಯಿತು. ಬೆರಳೆಣಿಕೆಯಷ್ಟು ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನವಿತ್ತು.
ಇದರ ನಡುವೆ ಸಂಬಂಧಿಗಳು, ಸ್ನೇಹಿತರೆಲ್ಲ ಮುಹೂರ್ತ ಕಣ್ತುಂಬಿಕೊಳ್ಳಲು ವಿಭಿನ್ನ ವ್ಯವಸ್ಥೆ ಮಾಡಲಾಗಿತ್ತು. ಈಗ ಇದುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ದರ್ಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯು ಟ್ಯೂಬ್ನಲ್ಲೇ ಮದುವೆ ಲೈವ್
ಮುಹೂರ್ತ ಮತ್ತು ಆರತಕ್ಷತೆಯನ್ನು ಯು ಟ್ಯೂಬ್ ಮೂಲಕ ಲೈವ್ ಮಾಡಲಾಯಿತು. ಹಾಗಾಗಿ ದೂರದೂರುಗಳಿಂದ ಬರಲು ಸಾದ್ಯವಾಗದ ಸಂಬಂಧಿಗಳು, ಸ್ನೇಹಿತರು ಮದುವೆಯನ್ನು ಕಣ್ತುಂಬಿಕೊಳ್ಳಲು ಅವಕಾಶವಾಯಿತು. ದೂರದಿಂದಲೇ ಹರಸುವ ಅವಕಾಶ ಲಭಿಸಿತು.
ಇನ್ವಿಟೇಷನ್ ಜೊತೆ ಯು ಟ್ಯೂಬ್ ಲಿಂಕ್
ಅಮಂತ್ರಣ ಪತ್ರಿಕೆಯನ್ನು ಕೂಡ ವಾಟ್ಸಪ್ ಮೂಲಕ ಹಂಚಲಾಗಿದೆ. ಈ ವೇಳೆ ಯು ಟ್ಯೂಬ್ ಲಿಂಕ್ ಪ್ರಕಟಿಸಿ, ಸಮಯವನ್ನು ಮೊದಲೇ ತಿಳಿಸಲಾಗಿತ್ತು. ಹಾಗಾಗಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಎಲ್ಲರು ಯು ಟ್ಯೂಬ್ ಮೂಲಕ ಮದುವೆ ಕಣ್ತುಂಬಿಕೊಂಡಿದ್ದಾರೆ.
ದರ್ಶನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಳಿದವರಿಗು ಇದು ಮಾದರಿಯಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]