ಶಿವಮೊಗ್ಗ ಲೈವ್.ಕಾಂ | SHIMOGA NEWS | 07 ಅಕ್ಟೋಬರ್ 2021
ಶಿವಮೊಗ್ಗ ದಸರಾಗೆ ವೈಭವದ ಚಾಲನೆ ಸಿಕ್ಕಿದೆ. ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಅವರು ನಾಡದೇವಿಗೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು.
ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಉದ್ಘಾಟನಾ ಸಮಾರಂಭ ನಡೆಯಿತು. ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಅವರು ದಸರಾವನ್ನು ಉದ್ಘಾಟನೆ ಮಾಡಿದರು.
ಬೊಂಬೆ ಪೂಜೆ, ನಾಡದೇವಿಗೆ ಮಂಗಳಾರತಿ
ನವರಾತ್ರಿ ಹಿನ್ನೆಲೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದಲ್ಲಿ ಬೊಂಬೆಗಳನ್ನು ಕೂರಿಸಲಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪ, ದಸರಾ ಉದ್ಘಾಟಕರಾದ ಶಿವಕುಮಾರ್ ಬೇಗಾರ್, ಮೇಯರ್ ಸುನೀತಾ ಅಣ್ಣಪ್ಪ ಅವರು ಬೊಂಬೆ ಪೂಜೆ ನೆರವೇರಿಸಿದರು. ಬಳಿಕ ವೇದಿಕೆ ಮೇಲೆ ಪ್ರತಿಷ್ಠಾಪಿಸಲಾಗಿರುವ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿದರು.
VIDEO REPORT
‘ಓದು ಓದು ಅಂದರೆ ಸಂಸ್ಕೃತಿ ಬೆಳೆಯಲ್ಲ’
ದಸರಾ ಉದ್ಘಾಟನೆ ಮಾಡಿ ಮಾತನಾಡಿದ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಅವರು, ಮಕ್ಕಳಿಗೆ ಸಂಸ್ಕೃತಿ ಕಲಿಸುವುದು ಅನಿವಾರ್ಯ. ಹಬ್ಬ, ಹರಿದಿನಗಳು ಸಂಸ್ಕೃತಿಯನ್ನು ಕಲಿಸುತ್ತದೆ. ಬರಿ ಓದು, ಓದು ಎಂದರೆ ಸಂಸ್ಕೃತಿ ಉಳಿಯುವುದಿಲ್ಲ. ಇನ್ನು, ಪರಿಸರ ಶುದ್ಧವಾಗಿರಬೇಕಾದರೆ ಕಾಡು ಉಳಿಸಬೇಕು. ಕಾಡುಗಳ ಸಂರಕ್ಷಣೆ ಮಾಡುವತ್ತ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯು ಸಂಸ್ಕಾರ ಕೊಡುವ ಕೇಂದ್ರವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಗೌರವ ಕೊಡುವ ದೇಶ ನಮ್ಮದಾಗಿದೆ. ದೇಶಕ್ಕೆ ತಾಯಿ ಸ್ಥಾನ ನೀಡಲಾಗಿದೆ. ಇನ್ನಷ್ಟು ಸಂಸ್ಕಾರ ಪಡೆಯುವತ್ತ ಮುಂದುವರೆಯಬೇಕಿದೆ ಎಂದರು.
ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ವಿರೋಧ ಪಕ್ಷ ನಾಯಕಿ ಯಮುನಾ ರಂಗೇಗೌಡ, ಕಾರ್ಪೊರೇಟರ್’ಗಳು,ಪಾಲಿಕೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200