ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 3 ನವೆಂಬರ್ 2021
ಗಾಂಜಾ ಹಾವಳಿ ಹೆಚ್ಚಳಕ್ಕೆ ಕೆಲ ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೆ ಆರೋಪದ ಹಿನ್ನೆಲೆ ಸಿಬ್ಬಂದಿಯೊಬ್ಬರನ್ನು ಜಿಲ್ಲಾ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ.
ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆ ಮುಖ್ಯಪೇದೆ ಅಶೋಕ್ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಏನಿದು ಪ್ರಕರಣ?
ಜೂನ್ 28ರ ರಾತ್ರಿ ಭದ್ರಾವತಿ – ತರೀಕೆರೆ ರೆಸ್ತೆಯಲ್ಲಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಭದ್ರಾವತಿಯ ಮಧು ಎಂಬಾತ ಗಾಂಜಾ ಮಾರಾಟ ಮಾಡಲು ಹೊರ ರಾಜ್ಯದಿಂದ ಗಾಂಜಾ ತರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಆರೋಪಿ ಮಧುನನ್ನು ಪೊಲೀಸರು ಬಂಧಿಸಿದ್ದರು.
ಬಂಧನಕ್ಕೊಳಗಾದ ಮಧು ಸಾರ್ವಜನಿಕರ ಎದುರಲ್ಲೇ ತಪ್ಪಿಸಿಕೊಂಡು ಹೋಗಿದ್ದ. ಇದು ಪೊಲೀಸರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ವಿಚಾರ ತಿಳಿದು ಮಧು ಬಂಧನ ಮಾಡುವಂತೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು.
ಎಸ್.ಪಿ ಮುಂದೆ ಬಾಯಿಬಿಟ್ಟ
ತಪ್ಪಿಸಿಕೊಂಡಿದ್ದ ಮಧುನನ್ನು ನ್ಯೂ ಟೌನ್ ಠಾಣೆ ಪೊಲೀಸರು ಪುನಃ ಬಂಧಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರೆ ಮಧು ವಿಚಾರಣೆ ಮಾಡಿದ್ದಾರೆ. ಆಗ ಆತ ತಪ್ಪಿಸಿಕೊಳ್ಳಲು ಸಿಬ್ಬಂದಿಯೊಬ್ಬರು ನೆರವು ನೀಡಿದ್ದನ್ನು ಬಾಯಿಬಿಟ್ಟಿದ್ದ.
‘ಗಾಂಜಾ ಪ್ರಕರಣ ಪ್ರಮುಖ ಆರೋಪಿ ತಪ್ಪಿಸಿಕೊಳ್ಳಲು ಮುಖ್ಯಪೇದೆ ಅಶೋಕ್ ಸಹಕಾರ ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಮಧು ಹೇಳಿಕೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.