ಶಿವಮೊಗ್ಗ ಲೈವ್.ಕಾಂ |SHIMOGA NEWS | 4 DECEMBER 2020
ಗಲಭೆ, ನಿಷೇಧಾಜ್ಞೆ, ಕೆಲವು ವಾರ್ಡ್ಗಳಲ್ಲಿ ಕರ್ಫ್ಯೂ ಜಾರಿಯ ನಂತರ ಶಿವಮೊಗ್ಗ ಸಹಜ ಸ್ಥಿತಿಗೆ ಮರಳುತ್ತಿದೆ. ಬೆಳಗಿನ ಹೊತ್ತಿನಲ್ಲಿ ಶಿವಮೊಗ್ಗ ನಗರದಲ್ಲಿ ವಾಹನ ಮತ್ತು ಜನ ಸಂಚಾರ ಸಾಮಾನ್ಯ ದಿನದ ಹಾಗೆಯೇ ಇದೆ.
ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಹಾಲು, ತರಕಾರಿ, ದಿನಸಿ | ಶಿವಮೊಗ್ಗ ನಗರದ ಬಹುತೇಕ ಎಲ್ಲಾ ಕಡೆಯಲ್ಲೂ ಅಗತ್ಯ ವಸ್ತುಗಳ ಮಾರಾಟ ಆರಂಭವಾಗಿದೆ. ಹಾಲು, ತರಕಾರಿ, ದಿನಸಿ ಅಂಗಡಿಗಳ ಬಾಗಿಲು ತೆಗೆದಿವೆ. ಕರ್ಫ್ಯೂ ಜಾರಿಯಾಗಿರುವ ಪ್ರದೇಶದಲ್ಲೂ ಹಾಲು, ತರಕಾರಿ ಮಾರಾಟ ನಡೆಯುತ್ತಿದೆ. ಆತಂಕದಿಂದಲೇ ಜನರು ಬಂದು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ವಾಕಿಂಗ್, ಜಾಕಿಂಗ್ | ಪ್ರತಿ ದಿನ ಬೆಳಗ್ಗೆ ಇರುವಂತೆ ಇವತ್ತು ಕೂಡ ವಾಕಿಂಗ್, ಜಾಕಿಂಗ್ಗೆ ಜನರು ಮನೆಯಿಂದ ಹೊರ ಬಂದಿದ್ದಾರೆ.
ವಾಹನ ಸಂಚಾರ | ಬೆಳಗಿನ ಹೊತ್ತಿನಲ್ಲಿ ವಾಹನ ಸಂಚಾರ ಸಾಮಾನ್ಯ ದಿನದಷ್ಟು ಇಲ್ಲ. ಆದರೆ ನಗರದ ವಿವಿಧೆಡೆ ವಾಹನ ಸಂಚಾರ ಇದೆ.
ಬಸ್ಸುಗಳು, ಆಟೋ | ಶಿವಮೊಗ್ಗ ನಗರದ ಗಾಂಧಿ ಬಜಾರ್, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಹಾಗಾಗಿ ಭದ್ರಾವತಿ ಕಡೆಯಿಂದ ಬರುವ ಕೆಎಸ್ಆರ್ಟಿಸಿ ಬಸ್ಗಳು ಬೈಪಾಸ್ ಮೂಲಕ, ಇತರೆಡೆಯಿಂದ ಬರುವ ಬಸ್ಸುಗಳು ಕುವೆಂಪು ರಸ್ತೆ ಮೂಲಕ ಸಾಗರ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ತಲುಪುತ್ತಿವೆ. ಬೆರಳೆಣಿಕೆಯಷ್ಟು ಆಟೋಗಳು ಬೆಳಗ್ಗೆಯಿಂದ ರಸ್ತೆಗಿಳಿದಿವೆ.
ಬಂದ್ ಮಾಡಿಸಿದ ಪೊಲೀಸ್ | ನಗರದ ವಿವಿಧೆಡೆ ಬೆಳಗ್ಗೆ ಹೊಟೇಲ್, ಟೀ ಸ್ಟಾಲ್ಗಳು ಓಪನ್ ಆಗಿದ್ದವು. ಆದರೆ ಪೊಲೀಸರು ಅವುಗಳನ್ನು ಬಂದ್ ಮಾಡಿಸಿದರು. ಜನರು ಗುಂಪುಗೂಡುವ ಸಾದ್ಯತೆ ಇರುವುದರಿಂದ ಬಂದ್ ಮಾಡಿಸುತ್ತಿದ್ದಾರೆ.
ಬಿಗಿ ಬಂದೋಬಸ್ತ್ | ನೈಟ್ ಬೀಟ್ ಬಿಗಿಯಾಗಿದ್ದರಿಂದ, ಯಾವುದೆ ಅಹಿತಕರ ಘಟನೆ ಸಂಭವಿಸಿಲ್ಲ. ಇದೆ ಮಾದರಿಯಲ್ಲಿ ಗಸ್ತು ಮತ್ತು ಬಂದೋಬಸ್ತ್ ಬೆಳಗ್ಗೆನೂ ಇರಲಿದೆ. ನಗರದ ಪ್ರಮುಖ ಕಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಯಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]