ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿಯಾದರೂ ಆಟೋ, ಬೈಕುಗಳಿಗೆ ಬೆಂಕಿ
ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗ ಅಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಎಂಬುವವರನ್ನು ಬಂಧಿಸಲಾಗಿದೆ.
ಎಲ್ಲರೂ ಸಣ್ಣ ವಯಸ್ಸಿನವರು
ಬಂಧಿತರೆಲ್ಲ 21 ರಿಂದ 22 ವರ್ಷ ವಯಸ್ಸಿನವರು. ಖಾಸಿಫ್ ಮಾತ್ರ 30 ವರ್ಷದವನು. ಎಲ್ಲರೂ ಕ್ಲಾರ್ಕ್ ಪೇಟೆ ನಿವಾಸಿಗಳಾಗಿದ್ದರು. ಒಟ್ಟಿಗೆ ಇರುತ್ತಿದ್ದರು. ಇತ್ತೀಚೆಗೆ ಎಲ್ಲರೂ ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಖಾಸಿಫ್ ಮಾತ್ರ ಕ್ಲಾರ್ಕ್ ಪೇಟೆಯಲ್ಲಿ ವಾಸವಾಗಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರು ತಿಳಿಸಿದರು.
12 ಮಂದಿಯ ವಿಚಾರಣೆ
ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು. ಪ್ರಕರಣ ಸಂಬಂಧ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಹತ್ಯೆಗೆ ಕಾರಣವೇನು? ಹೇಗಾಯ್ತು ಘಟನೆ?
ಹರ್ಷ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತರ ವಿಚಾರಣೆ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ. ಭಾನುವಾರ ರಾತ್ರಿ ಹರ್ಷನನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎಂದು ರಕ್ಷಣಾಧಿಕಾರಿ ತಿಳಿಸಿದರು.