SHIVAMOGGA LIVE | 3 JUNE 2023
SHIMOGA : ಕೊಳಕ ಮಂಡಲ ಹಾವು ಕಚ್ಚಿ(Snake Bite) ಗಂಭೀರ ಸ್ಥಿತಿಗೆ ತಲುಪಿದ್ದ ಉರಗ ರಕ್ಷಕ ಸ್ನೇಕ್ ಕಿರಣ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ವೈದ್ಯರು ಮೂರ್ನಾಲ್ಕು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ನಡುವೆ ವೈದ್ಯಕೀಯ ವೆಚ್ಚ ಭರಿಸಲು, ಜೀವನ ನಿರ್ವಹಣೆಗೆ ಕಷ್ಟವಾಗಿದ್ದು ಸ್ನೇಕ್ ಕಿರಣ್ ಜನರ ನೆರವು ಕೇಳಿದ್ದಾರೆ.
ಶಿವಮೊಗ್ಗ ತಾಲೂಕು ಚಟ್ನಹಳ್ಳಿ ಬಳಿ ಹಾವು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಕರೆ ಮಾಡಿದ್ದರು. ಸ್ಥಳಕ್ಕೆ ತೆರಳಿದ ಸ್ನೇಕ್ ಕಿರಣ್ ಪರಿಸ್ಥಿತಿ ಗಮನಿಸಿ, ಹಾವು ಹಿಡಿಯುವುದು ಕಷ್ಟವಾಗಲಿದೆ ಎಂದು ತಿಳಿಸಿ ಹಿಂತಿರುಗುತ್ತಿದ್ದರು. ಹಾವು ಕಾಣಿಸಿಕೊಂಡಿದ್ದ ಸ್ಥಳದಿಂದ ಐದಾರು ಅಡಿಯಷ್ಟು ಹಿಂದಕ್ಕೆ ಬರುವಷ್ಟರಲ್ಲಿ ಕೊಳಕ ಮಂಡಲ ಹಾವು ಕಾಲಿಗೆ ಕಚ್ಚಿತ್ತು (Snake Bite).
ʼಹಾವು ಕಾಣಿಸಿಕೊಂಡಿದೆ ಎಂದು ತಿಳಿಸಿದ ಜಾಗದಲ್ಲಿ ಹುಡುಕಿದೆ. ಆದರೆ ಹಾವನ್ನ ಹಿಡಿಯಲು ಸಧ್ಯವಾಗದ ಪರಿಸ್ಥಿತಿ ಇತ್ತು. ಹಾಗಾಗಿ ಹಿಂದಕ್ಕೆ ತಿರುಗಿ ಸ್ಥಳದಿಂದ ಹೊರಟಿದ್ದೆ. ಕಾಲಿನ ಹಿಂಬದಿಗೆ ಮುಳ್ಳು ಚುಚ್ಚಿದ ಹಾಗೆ ಅನಿಸಿತು. ಹಿಂತಿರುಗಿ ನೋಡಿದಾಗ ಕೊಳಕ ಮಂಡಲ ಹಾವು ಕಚ್ಚಿತ್ತು. ಕಾಲಿಗೆ ಚಪ್ಪಲಿ ಹಾಕಿದ್ದರಿಂದ ಹಾವು ಕಚ್ಚಲು ಸಧ್ಯವಾಯಿತುʼ ಎಂದು ಸ್ನೇಕ್ ಕಿರಣ್ ಶಿವಮೊಗ್ಗ ಲೈವ್.ಕಾಂಗೆ ಘಟನೆ ವಿವರಿಸಿದರು.
‘ಬದುಕುವುದೆ ಅನುಮಾನ’
ಹಾವು ಕಚ್ಚಿದ ಕೂಡಲೆ ಸ್ನೇಕ್ ಕಿರಣ್ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಕಿರಣ್ ಚಿಕಿತ್ಸೆ ಪಡೆದರು. ಚಿಕಿತ್ಸೆ ವೇಳೆ ಪರಿಸ್ಥಿತಿ ಗಮನಿಸಿದ್ದ ವೈದ್ಯರು, ಸ್ನೇಕ್ ಕಿರಣ್ ಉಳಿಯುವುದೆ ಕಷ್ಟ ಎಂದು ತಿಳಿಸಿದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ʼಆಸ್ಪತ್ರೆಗೆ ಸೇರಿಸಿದಾಗ ರೋಗಿ ಕಡೆಯವರು ದಾಖಲೆಗಳಿಗೆ ಸಹಿ ಮಾಡಬೇಕು. ಆಗ ನಾನು ಶೇ.99ರಷ್ಟು ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರಂತೆ. ಕೊನೆಗೆ ಚಿಕಿತ್ಸೆ ನೀಡಿ ನನ್ನನ್ನು ಬದುಕಿಸಿದರು. ಈಗ ಮೂರ್ನಾಲ್ಕು ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆʼ ಎಂದು ಸ್ನೇಕ್ ಕಿರಣ್ ಹೇಳಿದರು.
ಮೊಬೈಲ್ ಹೋಯ್ತು, ಖರ್ಚು ಹೆಚ್ಚಾಯ್ತು
ಹಾವು ಕಚ್ಚಿದ ಮೇಲೆ ಸ್ನೇಕ್ ಕಿರಣ್ ಅವರನ್ನು ಆಟೋವೊಂದರಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆತರಲಾಯಿತು. ಈ ವೇಳೆ ಅವರ ಮೊಬೈಲ್ ಫೋನ್ ಕಾಣೆಯಾಗಿದೆ. ಇನ್ನು, ಚಿಕಿತ್ಸೆ ವೆಚ್ಚ, ದೈನಂದಿನ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದೆ ಸ್ನೇಕ್ ಕಿರಣ್ ಪರದಾಡಿದರು. ಶಿವಮೊಗ್ಗದಲ್ಲಿ ತನ್ನನ್ನು ನೋಡಿಕೊಳ್ಳಲು ಯಾರಿಲ್ಲ ಎಂದು ಕುಂದಾಪುರದಲ್ಲಿರುವ ಸಹೋದರಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ
ʼಆಟೋದಲ್ಲಿ ಬರುವಾಗ ಮೊಬೈಲ್ ಮಿಸ್ ಆಗಿದೆ. ಯಾವುದೆ ಕಾಂಟ್ಯಾಕ್ಟ್ ಇಲ್ಲವಾಗಿದೆ. ಇನ್ನು, ಆಸ್ಪತ್ರೆ ಖರ್ಚು ನಿಭಾಯಿಸುವುದು, ಜೀವನ ನಿರ್ವಹಣೆ ಕಷ್ಟವಾಗಿದೆ. ಶಿವಮೊಗ್ಗದಲ್ಲಿ ನೋಡಿಕೊಳ್ಳುವುದಕ್ಕೆ ಯಾರು ಇಲ್ಲ. ಹಾಗಾಗಿ ಕುಂದಾಪುರದಲ್ಲಿರುವ ತಂಗಿ ಮನೆಗೆ ಬಂದಿದ್ದೇನೆ. ಹೊರಗೆ ಓಡಾಡುತ್ತಿಲ್ಲʼ ಎಂದು ತಿಳಿಸಿದರು.
ನೆರವು ಕೋರಿದ ಉರಗ ರಕ್ಷಕ
ಶಿವಮೊಗ್ಗದಲ್ಲಿ ಸ್ನೇಕ್ ಕಿರಣ್ ಹೆಸರು ಜನಜನಿತ. ಯಾರದ್ದೆ ಮನೆ ಬಳಿ ಹಾವು ಕಾಣಿಸಿಕೊಂಡರು ಹಾಗಲು, ರಾತ್ರಿಯನ್ನದೆ ಹಾವನ್ನು ರಕ್ಷಣೆ ಮಾಡುತ್ತಿದ್ದರು. ಅಲ್ಲದೆ ಜನರಲ್ಲಿ ಹಾವುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಈಗ ಹಾಸಿಗೆ ಹಿಡಿದಿರುವ ಸ್ನೇಕ್ ಕಿರಣ್ ಜನರ ನೆರವು ಕೇಳಿದ್ದಾರೆ. ಸಾರ್ವಜನಿಕರು 9480023580 ಗೆ ಫೋನ್ ಪೇ ಮೂಲಕ ತಮ್ಮ ಹಣ ಕಳುಹಿಸಬಹುದಾಗಿದೆ.