SHIVAMOGGA LIVE NEWS | STONE PELTING| 06 ಮೇ 2022
ಶಿವಮೊಗ್ಗದ ಸೂಳೆಬೈಲು ಸಮೀಪದ ಇಂದಿರಾ ನಗರದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗಾಜು ಪುಡಿಯಾಗಿದೆ. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜನ ಗುಂಪುಗೂಡಿದರು. ಹಾಗಾಗಿ ಸೂಳೆಬೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು. ಕೂಡಲೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಏನಿದು ಪ್ರಕರಣ?
ಕಾರು ಶಿವಮೊಗ್ಗದಿಂದ ಮತ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಮತ್ತೂರಿನಲ್ಲಿರುವ ತಮ್ಮ ಸಂಬಂಧಿಯ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸೂಳೆಬೈಲು ಇಂದಿರಾ ನಗರದ ಬಳಿಕ ಇಬ್ಬರು ಅಥವಾ ಮೂವರು ದುಷ್ಕರ್ಮಿಗಳು ಕಾರಿನ ಹಿಂಬದಿಗೆ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಹಿಂಬದಿ ಗಾಜು ಪುಡಿಯಾಗಿದೆ.
ಬಿಗುವಿನ ವಾತಾವರಣ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸೂಳೆಬೈಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಿಂದೂ ಸಂಘಟನೆ ಪ್ರಮುಖರು, ಕಾರ್ಯಕರ್ತರು ಸೂಳೆಬೈಲಿನಲ್ಲಿ ಜಮಾಯಿಸಿದರು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಅಂಗಡಿ ಮುಂಗಟ್ಟು ಬಂದ್ ಮಾಡಿಸಿದರು. ಗುಂಪು ಸೇರದಂತೆ ನಿಯಂತ್ರಿಸಿದರು.
ಸ್ಥಳಕ್ಕೆ ರಕ್ಷಣಾಧಿಕಾರಿ ದೌಡು
ಇನ್ನು, ಕಾರಿಗೆ ಕಲ್ಲು ತೂರಿದ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದಾರೆ.
ರಕ್ಷಣಾಧಿಕಾರಿ ಭೇಟಿಯಾದ ಮುಖಂಡರು
ಮತ್ತೊಂದೆಡೆ ಹಿಂದೂ ಸಂಘಟನೆ, ಬಿಜೆಪಿ ಮುಖಂಡರು, ಕಾರ್ಯಕರ್ತರು ದೂರು ನೀಡಲು ರಾತ್ರೋರಾತ್ರಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಭೇಟಿಗೆ ನಿರ್ಧರಿಸಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅವರು ಭೇಟಿ ನೀಡಿದ್ದರಿಂದ ಅಲ್ಲಿಯೇ ಅವರನ್ನು ಭೇಟಿಯಾದರು. ಸೂಳೆಬೈಲು ರಸ್ತೆಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.
ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕಲ್ಲು ಹೊಡೆದವರ ಪತ್ತೆ ಕಾರ್ಯ ನಡೆಯುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಜೈಲಿಗೆ ಹೋದರೂ ಪಾಠ ಕಲಿಯಲಿಲ್ಲ, ಬಿಡುಗಡೆಯಾಗಿ ಬಂದ ಮೇಲೆ ಮತ್ತೆ ಜೀವ ಬೆದರಿಕೆ