ಶಿವಮೊಗ್ಗ ಲೈವ್.ಕಾಂ | 9 ಮೇ 2019
ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನುವ ಹಾಗೆ, ಚುನಾವಣೆ ಮುಗಿದರೂ, ಸೋಲು ಗೆಲುವಿನ ಲೆಕ್ಕಾಚಾರ ನಿಂತಿಲ್ಲ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಅಲ್ಲಿಯವರೆಗೂ ಮತಗಣಿತ ನಡೆಯುತ್ತಲೇ ಇರುತ್ತದೆ.
ಲೋಕಸಭೆ ಚುನಾವಣೆ ಬಳಿಕ ಮೂರು ಪ್ರಮುಖ ಪಕ್ಷಗಳು ಸಮೀಕ್ಷೆ ನಡೆಸಿವೆ. ಬೂತ್ ಮಟ್ಟದಿಂದ ಲೆಕ್ಕಾಚಾರ ನಡೆದಿದ್ದು, ಅಂತಿಮ ವರದಿಯನ್ನು ಸಿದ್ಧಪಡಿಸಿಕೊಂಡಿವೆ. ಇದರ ಆಧಾರದ ಮೇಲೆಯೇ ಅಭ್ಯರ್ಥಿಗಳು ಮತ್ತು ಪಕ್ಷದ ಮುಖಂಡರು ಗೆಲುವು ತಮ್ಮದೇ ಎಂದು ಹೇಳಿಕೆ ನೀಡುತ್ತಿದ್ದಾರೆ.
ಯಾರಿಗೆ ಸೇರುತ್ತೆ ಎರಡು ಲಕ್ಷ ಮತ?
ಶಿವಮೊಗ್ಗ ಲೋಕಸಭೆಗೆ 2018ರಲ್ಲಿ ಉಪ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 5,43,306 ಮತ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತ ಗಳಿಸಿದ್ದರು. ಗೆಲುವಿನ ಅಂತರ 52,148 ಮತಗಳಾಗಿದ್ದವು.
ಉಪ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ 77,388, ಜೆಡಿಎಸ್ 51,815 ಮತ ಪಡೆದಿದ್ದವು. ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ 67,899, ಬಿಜೆಪಿ 75,181, ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ 62,415, ಬಿಜೆಪಿ 51,469, ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ 58,105, ಬಿಜೆಪಿ 65,319, ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ 58,787, ಬಿಜೆಪಿ 77,570, ಸೊರಬ ತಾಲ್ಲೂಕು ಜೆಡಿಎಸ್ 68,605, ಬಿಜೆಪಿ 67,108, ಸಾಗರ ತಾಲ್ಲೂಕು ಜೆಡಿಎಸ್ 68,993, ಬಿಜೆಪಿ 60,526, ಬೈಂದೂರು ಜೆಡಿಎಸ್ 54,522, ಬಿಜೆಪಿ 68,992 ಮತ ಪಡೆದಿದ್ದವು.
ಉಪ ಚುನಾವಣೆ ಫಲಿತಾಂಶ ಗಮನಿಸಿದಾಗ, ಬಿಜೆಪಿ ಪಕ್ಷ ಭದ್ರಾವತಿ, ಸೊರಬ, ಸಾಗರದಲ್ಲಿ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿತ್ತು. ಉಪ ಚುನಾವಣೆಗೆ ಹೋಲಿಸಿದರೆ, ಈ ಬಾರಿ 2 ಲಕ್ಷ ಹೆಚ್ಚುವರಿ ಮತದಾನವಾಗಿದೆ. ಈ ಮತಗಳು ಯಾರ ಪಾಲಾಗಿವೆ ಎಂಬುದು ಸದ್ಯದ ಕುತೂಹಲ.
ಬೂತ್ ವಾರು ಪ್ರಚಾರ, ಸಮೀಕ್ಷೆ
ಜಿಲ್ಲೆಯಲ್ಲಿ ಬಿಜೆಪಿ, ಬೂತ್ ಮಟ್ಟದಿಂದಲೂ ಸಶಕ್ತವಾಗಿದೆ. ಇದುವೆ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಯಲ್ಲಿ, ಬಿಜೆಪಿ ಗೆಲುವಿಗೆ ಕಾರಣ. ಈ ಬಾರಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕೂಡ, ಬಿಜೆಪಿಯ ತಂತ್ರವನ್ನೇ ಅನುಸರಿಸಿ, ಬೂತ್ ಮಟ್ಟದಿಂದ ಪ್ರಚಾರ ನಡೆಸಿದವು. ಇನ್ನು, ಚುನಾವಣೆ ಮುಗಿಯುತ್ತಿದ್ದಂತೆ, ಬೂತ್ ಮಟ್ಟದಿಂದಲೇ ಮಾಹಿತಿ ತರಿಸಿಕೊಂಡು, ಸಮೀಕ್ಷೆ ನಡೆಸಲಾಗಿದೆ.
ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರತ್ಯೇಕವಾಗಿ ಆಂತರಿಕ ಸಮೀಕ್ಷೆ ನಡೆಸಿವೆ. ಒಂದೊಂದು ಸಮೀಕ್ಷೆಯೂ ಒಂದೊಂದು ರಿಪೋರ್ಟ್ ನೀಡಿವೆ. ಇದರ ಆಧಾರದ ಮೇಲೆಯೇ, ಆಯಾ ಪಕ್ಷದ ಮುಖಂಡರು, ತಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ಯಾವ್ಯಾವ ಪಕ್ಷದ ಸಮೀಕ್ಷೆಯಲ್ಲಿ ಏನೇನಿದೆ?
ಮಧು ಬಂಗಾರಪ್ಪಗೆ, ಶಿವಮೊಗ್ಗ ನಗರದಲ್ಲಿ ಬಿಜೆಪಿಗಿಂತಲೂ – 5 ಸಾವಿರ, ಶಿವಮೊಗ್ಗ ಗ್ರಾಮಾಂತರದಲ್ಲಿ + 8 ಸಾವಿರ, ಭದ್ರಾವತಿಯಲ್ಲಿ + 25 ಸಾವಿರ, ತೀರ್ಥಹಳ್ಳಿಯಲ್ಲಿ +12 ಸಾವಿರ, ಸೊರಬ +18 ಸಾವಿರ, ಶಿಕಾರಿಪುರದಲ್ಲಿ + 5 ಸಾವಿರ, ಸಾಗರದಲ್ಲಿ + 20 ಸಾವಿರ, ಬೈಂದೂರಿನಲ್ಲಿ + 5 ಸಾವಿರ ಮತಗಳು ಮಧು ಬಂಗಾರಪ್ಪ ಪರವಾಗಿ ಬರಲಿದೆ ಎಂದು ಜೆಡಿಎಸ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷ ಕೂಡ ಆಂತರಿಕ ಸಮೀಕ್ಷೆ ನಡೆಸಿದ್ದು, ಶಿವಮೊಗ್ಗ ನಗರದಲ್ಲಿ – 5 ಸಾವಿರ, ಶಿವಮೊಗ್ಗ ಗ್ರಾಮಾಂತರದಲ್ಲಿ + 12 ಸಾವಿರ, ಭದ್ರಾವತಿಯಲ್ಲಿ + 30 ಸಾವಿರ, ತೀರ್ಥಹಳ್ಳಿಯಲ್ಲಿ +13 ಸಾವಿರ, ಸೊರಬ +18 ಸಾವಿರ, ಶಿಕಾರಿಪುರದಲ್ಲಿ + 5 ಸಾವಿರ, ಸಾಗರದಲ್ಲಿ + 15 ಸಾವಿರ, ಬೈಂದೂರಿನಲ್ಲಿ + 5 ಸಾವಿರ ಮತಗಳು ಮಧು ಬಂಗಾರಪ್ಪ ಪರವಾಗಿ ಬರಲಿದೆ ಎಂದು ಜೆಡಿಎಸ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಮತ್ತೊಂದೆಡೆ ಬಿಜೆಪಿಯೂ ಆಂತರಿಕ ಸಮೀಕ್ಷೆಗಳನ್ನು ನಡೆಸಿದೆ. ಒಂದು ಸಮೀಕ್ಷೆಯ ಪ್ರಕಾರ, ಮೈತ್ರಿ ಅಭ್ಯರ್ಥಿಗಿಂತಲೂ ಬಿ.ವೈ.ರಾಘವೇಂದ್ರ ಶಿವಮೊಗ್ಗ ನಗರದಲ್ಲಿ +35 ಸಾವಿರ, ಶಿವಮೊಗ್ಗ ಗ್ರಾಮಾಂತರದಲ್ಲಿ + 12 ಸಾವಿರ, ಭದ್ರಾವತಿಯಲ್ಲಿ – 6 ಸಾವಿರ, ತೀರ್ಥಹಳ್ಳಿಯಲ್ಲಿ + 14 ಸಾವಿರ, ಸೊರಬ – 8 ಸಾವಿರ, ಶಿಕಾರಿಪುರದಲ್ಲಿ + 12 ಸಾವಿರ, ಸಾಗರದಲ್ಲಿ – 8 ಸಾವಿರ, ಬೈಂದೂರಿನಲ್ಲಿ + 18 ಸಾವಿರ ಮತಗಳು ಲಭಿಸಲಿವೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]