ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 ಅಕ್ಟೋಬರ್ 2020
ವಿಐಎಸ್ಎಲ್ ಕ್ವಾರ್ಟರ್ಸ್ನ ಬಾಡಿಗೆ ಹೆಚ್ಚಳ ಮತ್ತು ನೀರು ಪೂರೈಕೆ ಸ್ಥಗತಿಗೊಳಿಸಿದ್ದ ಆಡಳಿತ ಮಂಡಳಿ ಕ್ರಮ ಖಂಡಿಸಿ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಐಎಸ್ಎಲ್ ನಗರಾಡಳಿತ ಕಚೇರಿ ಮುಂದೆ ಕುಂದು ಕೊರತೆಗಳ ಹೋರಾಟ ಸಮಿತಿಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಂಪಿಎಂ ಮಾದರಿ ಅನುಸರಿಸಲು ಯತ್ನ
ನಿವೃತ್ತ ನೌಕರರನ್ನು ವಿಐಎಸ್ಎಲ್ ಕ್ವಾರ್ಟರ್ಸ್ನಿಂದ ಖಾಲಿ ಮಾಡಿಸಲು ಯತ್ನಿಸಲಾಗುತ್ತಿದೆ. ಪಕ್ಕದ ಎಂಪಿಎಂ ಕ್ವಾರ್ಟರ್ಸ್ನಲ್ಲಿ ಆಗಿರುವಂತೆ ಇಲ್ಲಿಯೂ ನೌಕರರಿಗೆ ಕಿರುಕುಳ ಕೊಡಲಾಗುತ್ತಿದೆ. ಬಾಡಿಗೆ ಹೆಚ್ಚಳ, ನೀರು ಸರಬರಾಜು ಸ್ಥಗಿತ ಮಾಡಿರುವುದು ಇದೆಕ್ಕೆ ಸಾಕ್ಷಿ. ಉಕ್ಕು ಪ್ರಾಧಿಕಾರದ ಸೂಚನೆ ಇಲ್ಲದಿದ್ದರೂ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸದಿದ್ದರೆ ಕಾರ್ಯಪಾಲಕ ನಿರ್ದೇಶಕರ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಶಾಸಕ ಸಂಗಮೇಶ್ವರ್ ಅವರು ಎಚ್ಚರಿಕೆ ನೀಡಿದರು.
ಬಾರದ ಅಧಿಕಾರಿ ಹೆಚ್ಚಾಯ್ತು ಆಕ್ರೋಶ
ಬಹು ಹೊತ್ತು ಪ್ರತಿಭಟನೆ ನಡೆಸಿದರೂ ಕಾರ್ಯಪಾಲಕ ನಿರ್ದೇಶಕರು ಸ್ಥಳಕ್ಕೆ ಬರಲಿಲ್ಲ. ಇದರಿಂದ ಶಾಸಕ ಸಂಗಮೇಶ್ವರ್ ಅವರು ಗರಂ ಆದರು. ಜನಪ್ರತಿನಿಧಿಯೊಬ್ಬರು ಕರೆದರೂ ಅಧಿಕಾರಿ ಬರುವುದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಪರಿಸ್ಥಿತಿಯ ತೀವ್ರತೆ ಅರಿತ ಕಾರ್ಯಪಾಲಕ ನಿರ್ದೇಶಕರು ಸ್ಥಳಕ್ಕೆ ಬಂದು ಬೇಡಿಕೆ ಆಲಿಸಿದರು.
ಎರಡು ಗಂಟೆ ನಿರಂತರ ಚರ್ಚೆ
ಶಾಸಕ ಸಂಗಮೇಶ್ವರ್ ಅವರು ನಗರಾಡಳಿತ ಕಚೇರಿಯಲ್ಲಿ ಕಾರ್ಯಪಾಲಕ ನಿರ್ದೇಶಕರ ಕಚೇರಿಯಲ್ಲಿ ಎರಡು ಗಂಟೆ ಚರ್ಚೆ ನಡೆಸಿದರು. ಮೂರು ದಿನದ ಬಳಿಕ ಎರಡು ಹೊತ್ತು ಒಂದು ಗಂಟೆ ನೀರು ಬಿಡುವುದಾಗಿ ಅಧಿಕಾರಿ ಒಪ್ಪಿದರು. ಮನೆಗಳ ಪರವಾನಗಿಯನ್ನು 5 ವರ್ಷದ ಬದಲಿಗೆ 6 ವರ್ಷಕ್ಕೆ ನವೀಕರಣಕ್ಕೆ ಒಪ್ಪಿಗೆ ಸೂಚಿಸಿದರು.
ಸಮಿತಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಬಾಲಕೃಷ್ಣ, ಗೌರವಾಧ್ಯಕ್ಷ ಡಿಎಸ್ಎಸ್ ರಾಜ್ಯ ಖಜಾಂಚಿ ಭದ್ರಾ ಸತ್ಯಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಕಾರ್ಯದರ್ಶಿ ಅಮೃತ್ ಕುಮಾರ್, ಮುಖಂಡರಾದ ಕಾಂತರಾಜ್, ಗೋವಿಂದಸ್ವಾಮಿ, ಕಬ್ಬಡಿ ಕೃಷ್ಣೇಗೌಡ, ಭೈರಪ್ಪ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]