ಹೊಸನಗರ: ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ (Padayatra) ನಡೆಯಿತು. ಹೊಸನಗರ ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ, ಹೊಸನಗರ ವಿಧಾನಸಭಾ ಕ್ಷೇತ್ರದ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಪಾದಯಾತ್ರೆ ಆರಂಭಿಸಲಾಯಿತು.
ಇಲ್ಲಿದೆ ಪಾದಯಾತ್ರೆ ಹೈಲೈಟ್ ಪಾಯಿಂಟ್ಸ್
1 ಬೆಳಗ್ಗೆ 9ಕ್ಕೆ ಚಿಕ್ಕಪೇಟೆಯ ಗಣಪತಿ ದೇವರ ಸನ್ನಿಧಿಯಲ್ಲಿ ಪಾದಯಾತ್ರೆಗೆ ಚಾಲನೆ ದೊರೆಕಿತು. ಬೆಳಗ್ಗೆ 10 ಗಂಟೆಗೆ ನಗರದಿಂದ ಹೊರಟ ಪಾದಯಾತ್ರೆಯಲ್ಲಿ ಐನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು, ಕೂಲಿಕಾರ್ಮಿಕರೂ ಹೆಜ್ಜೆಹಾಕಿದರು.2 ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಬಿ.ಸ್ವಾಮಿರಾವ್ ನೇತೃತ್ವದಲ್ಲಿ ಸ್ತಬ್ಧಚಿತ್ರಗಳು, ವಾದ್ಯಗಳೊಂದಿಗೆ ಪಾದಯಾತ್ರೆಯ ಸಾಗಿತು. ಶ್ರೀಗಳು ಮತ್ತು ಸ್ವಾಮೀರಾವ್ ಅವರು 17ಕಿ.ಮೀ. ದೂರ ನಡೆದು ಗಮನ ಸೆಳೆದರು.3 ಬಿಸಿಲ ಝಳದ ಮಧ್ಯೆ ಟೀಶರ್ಟ್, ಟೋಪಿ ಧರಿಸಿ, ಬಾವುಟ ಹಿಡಿದ ಯುವ ಸಮೂಹದ ಉತ್ಸಾಹ ಜೋರಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಹೋರಾಟಗಾರರಿಗೆ ಅಲ್ಲಲ್ಲಿ ಉಪಹಾರ, ಹಣ್ಣು, ಪಾನೀಯಗಳ ವ್ಯವಸ್ಥೆ ಮಾಡಿದ್ದರು. ಕಾರಣಗಿರಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾರಿಯುದ್ದಕ್ಕೂ ಪೊಲೀಸ್ ಬಂದೋಬಸ್ತ್, ಅಂಬ್ಯುಲೆನ್ಸ್ ಸೇವೆ ವ್ಯವಸ್ಥೆಗೊಳಿಸಲಾಗಿತ್ತು.
ನಗರದ ಚಿಕ್ಕಪೇಟೆ ವೃತ್ತದಲ್ಲಿ ಸಂಜೆ ಸಭೆ ನಡೆಯಿತು. ಈ ಸಂದರ್ಭ ಪ್ರಮುಖರು ಮಾತನಾಡಿದರು. ಯಾರೆಲ್ಲ ಏನೇನು ಹೇಳಿದರು? ಇಲ್ಲಿದೆ ವಿವರಣೆ.
ಪಾದಯಾತ್ರೆಗೆ ಸೇರಿರುವ ಜನಸಾಮಾನ್ಯರನ್ನು ನೋಡಿದರೆ ಇಲ್ಲಿಯ ಸಮಸ್ಯೆ ಏನೆಂದು ಅರ್ಥವಾಗುತ್ತದೆ. ಅಲ್ಲದೆ ಹೋರಾಟದಲ್ಲಿ ಧರ್ಮಾತೀತ, ಪಕ್ಷಾತೀತ, ಜಾತ್ಯತೀತವಾಗಿ ಒಗ್ಗಟ್ಟು ಪ್ರದರ್ಶನ ಕಂಡುಬಂದಿದೆ. ಇದು ಭವಿಷ್ಯದ ಹೋರಾಟಕ್ಕೆ ಹುಮ್ಮಸ್ಸು ನೀಡಲಿದೆ. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮೂಲೆಗದ್ದೆ ಮಠ
ಹೊಸನಗರದಿಂದ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಕಿತ್ತುಕೊಂಡ ಸಂದರ್ಭ ಅದನ್ನು ವಿರೋಧಿಸಲಾಗಿತ್ತು. ಆದರೆ ಅದು ಫಲಕಾರಿ ಆಗಲಿಲ್ಲ. ಇದೀಗ ಕ್ಷೇತ್ರಕ್ಕಾಗಿ ನಗರ ಹೋಬಳಿಯಿಂದ ನಿರೀಕ್ಷೆಗೂ ಮೀರಿ ಹೋರಾಟದ ಕಿಚ್ಚು ಹತ್ತಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.ಆರಗ ಜ್ಞಾನೇಂದ್ರ, ಶಾಸಕ
ಹೊಸನಗರವು ನಾಡಿಗಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದಿದೆ. ಅದಕ್ಕಾಗಿ ಫಲ ದೊರಕಿಲ್ಲ. ಕ್ಷೇತ್ರಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ತನು-ಮನ, ಧನ ಸಹಾಯ ನೀಡುತ್ತೇನೆ.ಗೋಪಾಲಕೃಷ್ಣ ಬೇಳೂರು, ಶಾಸಕ
ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹಾಲಗದ್ದೆ ಉಮೇಶ್, ಎನ್.ಆರ್. ದೇವಾನಂದ್, ಕೆ.ವಿ. ಕೃಷ್ಣಮೂರ್ತಿ, ಆಲುವಳ್ಳಿ ವೀರೇಶ್, ಬಿ.ಜಿ. ಚಂದ್ರಮೌಳಿ ಗೌಡ, ರಮೇಶ ಹಲಸಿನಹಳ್ಳಿ, ಕರುಣಾಕರ ಶೆಟ್ಟಿ, ಸುಮಾ ಸುಬ್ರಹ್ಮಣ್ಯ ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹ್ಮಣ್ಯ, ಸುಧೀಂದ್ರ ಪಂಡಿತ್, ಆರ್.ಎ. ಚಾಬುಸಾಬ್, ವರ್ತೇಶ್, ನಗರ ನಿತಿನ್, ನರ್ತಿಗೆ ಸುರೇಶ್, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪತ್ರಕರ್ತ ರವಿ ಬಿದನೂರು ಕಾರ್ಯಕ್ರಮ ನಿರ್ವಹಿಸಿದರು.
ಇವತ್ತು ಎರಡನೇ ದಿನದ ಪಾದಯಾತ್ರೆ
ಇನ್ನು ಇವತ್ತು ಎರಡನೇ ದಿನದ ಪಾದಯಾತ್ರೆ ನಡೆಯಲಿದೆ. ಹೊಸನಗರದಿಂದ ಆರಂಭಗೊಂಡು ರಿಪ್ಪನ್ಪೇಟೆ ವರೆಗೆ ಮುಂದುವರಿಯಲಿದೆ. ಇವತ್ತೂ ದೊಡ್ಡ ಸಂಖ್ಯೆಯ ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ