SHIVAMOGGA LIVE NEWS |5 JANUARY 2023
RIPPONPETE : ಶಿಕ್ಷಕರೊಬ್ಬರ ವರ್ಗಾವಣೆ (transfer) ಖಂಡಿಸಿ ಶಾಲೆಯ ಮಕ್ಕಳು, ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಲೆಯ ಗೇಟ್ ಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿರು. ಸಾಮೂಹಿಕವಾಗಿ ಟಿಸಿ ಪಡೆಯುವ ಎಚ್ಚರಿಕೆ ನೀಡಿದರು.
ಬಿದರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್ ಅವರನ್ನು ದಿಢೀರ್ ವರ್ಗಾವಣೆ (transfer) ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲೆ ಉತ್ತಮ ಶಾಲೆ
ಬಿದರಹಳ್ಳಿಯ ಸರ್ಕಾರಿ ಶಾಲೆ ರಾಜ್ಯದಲ್ಲೇ ಉತ್ತಮ ಶಾಲೆ ಎಂದು ಬಿರುದು ಪಡೆದಿದೆ. ಈ ಶಾಲೆಯ ಶಿಕ್ಷಕ ದಿನೇಶ್ ಅವರನ್ನು ಏಕಾಏಕಿ ವರ್ಗಾವಣೆ (transfer) ಮಾಡಲಾಗಿದೆ. ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಪಟ್ಟು ಹಿಡಿದರು. ಶಾಲೆಯ ಗೇಟ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
‘ಸಾಮೂಹಿಕವಾಗಿ ಟಿಸಿ ಪಡೆಯುತ್ತೇವೆ’
ಪ್ರತಿಭಟನೆ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ಶಾಲೆಯಲ್ಲಿ 70 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕರು ಸೇರಿ 4 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಶಾಲೆ ಎಂಬ ಹಿರಿಮೆ ಹೊಂದಿದೆ. ಗ್ರಾಮೀಣ ಭಾಗದ ಶಾಲೆಯ ಅಭಿವೃದ್ಧಿ ಸಹಿಸಲಾಗದೆ ಕೆಲವು ಪಟ್ಟಭದ್ರರು ನೆಚ್ಚಿನ ಶಿಕ್ಷಕನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆಪಾದಿಸಿದರು.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಸಾಮೂಹಿಕವಾಗಿ ಟಿಸಿ ಪಡೆಯುತ್ತೇವೆ ಎಂದು ಎಚ್ಚರಿಸಿದರು.
‘ಪರಿಶೀಲನೆ ನಡೆಸುತ್ತೇವೆ’
ಪ್ರತಿಭಟನೆಯ ವಿಚಾರ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಶಾಲೆಗೆ ಭೇಟಿ ನೀಡಿದರು. ಪ್ರತಿಭಟನಾನಿರತರ ಮನವಿ ಸ್ವೀಕರಿಸಿದರು. ನಿಯಮದಂತೆ ಶಿಕ್ಷಕನ ವರ್ಗಾವಣೆಯಾಗಿದೆ. ಹಿರಿಯ ಅಧಿಕಾರಿಗಳಿಗೆ ಪ್ರತಿಭಟನೆಯ ವಿಚಾರ ತಿಳಿಸುತ್ತೇನೆ. ಪರಿಶೀಲನೆ ನಡೆಸಿ ಇನ್ನೆರಡು ದಿನದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಹಾಗಾಗಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ – ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಓದು, ಬರಹ ಆರಂಭಿಸಿ ವಿಭಿನ್ನವಾಗಿ ಪ್ರತಿಭಟಿಸಿದ ಉರ್ದು ಶಾಲೆ ಮಕ್ಕಳು
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮರಾಜ್, ಉಪಾಧ್ಯಕ್ಷೆ ಕುಸುಮಾ ಸುರೇಶ್, ರಾಘವೇಂದ್ರ, ಸದಸ್ಯರಾದ ರಾಜೇಶ್, ನಾಗೇಶಪ್ಪ ಕೆರೆಮನೆ, ಅಮೃತ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಂಡಿ ಲಿಂಗರಾಜ್, ಗ್ರಾಮಸ್ಥರಾದ ಬಿ.ಪಿ.ಮಹೇಶ್, ರಮೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200