ಶಿಕಾರಿಪುರದ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವ, ಸಾವಿರ ಸಾವಿರ ಭಕ್ತರು ಭಾಗಿ, ಹೇಗಿತ್ತು ರಥೋತ್ಸವದ ವೈಭವ?

SHIVAMOGGA LIVE NEWS | 24 APRIL 2024

SHIKARIPURA : ಇತಿಹಾಸ ಪ್ರಸಿದ್ಧ ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು, ದೇವರನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಿದರು.

ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವಕ್ಕೆ ಮಿಥುನ ಲಗ್ನದ ಶುಭ ಸಂದರ್ಭದಲ್ಲಿ ಚಾಲನೆ ದೊರೆಯಿತು. ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಹಾಗೂ ತಹಶೀಲ್ದಾರ್‌ ಮಲ್ಲೇಶಪ್ಪ ಬಿ. ಪೂಜಾರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದ ಆವರಣದಿಂದ ಬ್ರಹ್ಮ ರಥೋತ್ಸವಕ್ಕೆ ನಡೆಯಿತು. ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಹುಚ್ಚರಾಯಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ನಂತರ ರಥದಲ್ಲಿ ಪ್ರತಿಷ್ಠಾಪಿಸಿದರು.

ರಥ ಎಳೆದು ಪುನೀತರಾದ ಭಕ್ತರು

ನಂತರ ಸಂಪ್ರದಾಯದಂತೆ ಹುಚ್ಚರಾಯಸ್ವಾಮಿ ದೇವಸ್ಥಾನದ ಆವರಣದಿಂದ ಮಂಗಳ ವಾದ್ಯ, ಬ್ಯಾಂಡ್‌ಸೆಟ್ ವಾದ್ಯದ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ತೇರುಬೀದಿಯಲ್ಲಿರುವ ಮಾರಿಕಾಂಬಾ ಗದ್ದುಗೆವರೆಗೂ ಬ್ರಹ್ಮರಥವನ್ನು ಎಳೆದು ತಂದು ನಿಲ್ಲಿಸಿದರು. ಬ್ರಹ್ಮರಥೋತ್ಸವದ ಪ್ರಯುಕ್ತ ಹುಚ್ಚರಾಯಸ್ವಾಮಿ ದೇವರ ಮೂರ್ತಿ, ದೇವಸ್ಥಾನ ಹಾಗೂ ಬ್ರಹ್ಮರಥವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮುಜರಾಯಿ ಇಲಾಖೆ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಿತ್ತು. ವಿವಿಧ ಸಂಘಟನೆಗಳು ಪಾನಕ ವಿತರಿಸಿದರು. 

Kalleshwara-Enterprises.webp

ಸುತ್ತಮುತ್ತ ಜಿಲ್ಲೆಗಳ ಭಕ್ತರು ಭಾಗಿ

ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಧಾರಾವಾಡ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಹುಚ್ಚರಾಯಸ್ವಾಮಿ ದೇವರ ದರ್ಶನ ಪಡೆದು, ಬ್ರಹ್ಮ ರಥಕ್ಕೆ ಪೂಜೆ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ಹುಚ್ಚರಾಯಸ್ವಾಮಿ ದೇವರ ಮೂರ್ತಿ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕುಟುಂಬ ಸಮೇತ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ – ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment