ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ (Shimoga Airport) ಕರಡಿ ನುಗ್ಗಿದೆ. ಇಂದು ಬೆಳಗ್ಗೆ ಘಟನೆ ನಡೆದಿದ್ದು, ಕರಡಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಕ್ಕದ ಹಳ್ಳಿಯಲ್ಲಿ ಕಾಣಿಸಿತ್ತು
ಆಹಾರ ಅರಸುತ್ತ ಬಂದಿರುವ ಕರಡಿಯೊಂದು ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಕರಡಿ ಓಡಾಡಿದೆ. ಸ್ಥಳೀಯರು ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ – ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?
ವಿಮಾನ ನಿಲ್ದಾಣಕ್ಕೆ ನುಗ್ಗಿತು
ವಿನಾಯಕ ನಗರದಲ್ಲಿ ಕರಡಿ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದರು. ಇದೇ ವೇಳೆ ವಿಮಾನ ನಿಲ್ದಾಣದ ಕಾಂಪೌಂಡ್ ಒಳಗೆ ಹಾರಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಒಳಗೆ ಪೊದೆ ಬೆಳೆದಿದ್ದು ಕರಡಿ ಅವಿತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ವಿಮಾನ ನಿಲ್ದಾಣದ ಮತ್ತು ವಿನಾಯಕ ನಗರ ಭಾಗದಲ್ಲಿ ಕರಡಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.







