ಚಲಿಸುತ್ತಿದ್ದ ಲಾರಿಯಲ್ಲಿ ದುರ್ವಾಸನೆ, ಅಡ್ಡಗಟ್ಟಿದ ಯುವಕರಿಗೆ ಕಾದಿತ್ತು ಆಘಾತ, ಕೆಲವೇ ಕ್ಷಣದಲ್ಲಿ ಜನಜಂಗುಳಿ

SHIVAMOGGA LIVE NEWS | 14 JUNE 2024

HOLEHONNURU : ಸಮೀಪದ ಕೂಡ್ಲಿ ಕ್ರಾಸ್ ಬಳಿ ದನದ ಮಾಂಸದ ತ್ಯಾಜ್ಯ ತುಂಬಿದ ಕ್ಯಾಂಟರ್‌ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ (Highway) ವಾಸನೆ ಬರುತ್ತಿರುವುದರಿಂದ ಅನುಮಾನಗೊಂಡು ಬೈಕ್‌ ಸವಾರರು ಲಾರಿಯನ್ನು ತಡೆದು ಪರಿಶೀಲಿಸಿದಾಗ ದನದ ಮಾಂಸದ ತ್ಯಾಜ್ಯ ಇರುವುದು ಗೊತ್ತಾಗಿದೆ.

ಕ್ಯಾಂಟರ್‌ ಬೆನ್ನಟ್ಟಿದ ಯುವಕರು

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕ್ಯಾಂಟರ್‌ ಲೋಡ್‌ನಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಯುವಕರಿಬ್ಬರು ಕ್ಯಾಂಟರ್‌ ಅನ್ನು ಬೆನ್ನಟಿ ಹಿಡಿಯಲು ಮುಂದಾದಾಗ ಬೈಕ್ ಸವಾರರ ಮೇಲೆ ಕ್ಯಾಂಟರ್‌ ಹತ್ತಿಸುವ ಪ್ರಯತ್ನ ನಡೆಯಿತು. ಇದರಿಂದ ಕೋಪಗೊಂಡ ಯುವಕರು ವಾಹನವನ್ನು ತಡೆದು ನಿಲ್ಲಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ ವಾಹನವನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.

ಕೂಡ್ಲಿ ಕ್ರಾಸ್‌ನಲ್ಲಿ ಜನ ಜಂಗುಳಿ

ದನದ ಮಾಂಸ ತ್ಯಾಜ್ಯ ಸಾಗಣೆ ಸುದ್ದಿ ಹರಡಿ ಕೂಡ್ಲಿ ಕ್ರಾಸ್‌ನಲ್ಲಿ ಜನ ಜಂಗುಳಿ ಉಂಟಾಗಿತ್ತು. ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು. ಪಕ್ಕದ ಚನ್ನಗಿರಿಯ ಕಸಾಯಿ ಖಾನೆಗಳಿಂದ ದನದ ಮಾಂಸದ ಕೊಂಬು ಮೂಳೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಂಗಳೂರಿನ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿತ್ತು. ಕ್ಯಾಂಟರ್‌ ಚಾಲಕ ಕಂಪನಿಗೆ ಸಂಬಂಧಿಸಿದ ಜಿಎಸ್‌ಟಿ ಬಿಲ್‌ಗಳನ್ನು ಪೊಲೀಸರಿಗೆ ನೀಡಿದ್ದು ತಪಾಸಣೆ ನಡೆಸಿದ್ದಾರೆ. ದನದ ಮೂಳೆಗಳನ್ನು ಪುಡಿ ಮಾಡಿ ರಾಸಾಯನಿಕಗಳಿಗೆ ಬಳಸುವ ಉದ್ದೇಶದಿಂದ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಲಾರಿಯಿಂದ ಕೆಟ್ಟ ವಾಸನೆ ಬರುತ್ತಿರುವ ಕಾರಣ ಪಟ್ಟಣದ ಹೊರವಲಯದ ಭದ್ರಾ ನದಿಯ ಬಳಿ ನಿಲ್ಲಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಯಡಿಯೂರಪ್ಪ ವಿರುದ್ಧ ವಾರೆಂಟ್‌, ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮೊದಲ ರಿಯಾಕ್ಷನ್‌

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : June 14, 2024 at 9:23 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜೂನ್ 14, 2024

Leave a Comment