ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021
ದಸರಾ ರಜೆಗೆ ಊರಿಗೆ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರ ಬೈಗ್ ಕಳ್ಳತನವಾಗಿದೆ. ಬಸ್ ನಿಲ್ದಾಣದಲ್ಲೇ ಘಟನೆ ಸಂಭವಿಸಿದೆ. ಬ್ಯಾಗುಗಳನ್ನ ಬಸ್ಸಿನಲ್ಲಿ ಇರಿಸಿ ನೀರಿನ ಬಾಟಲಿ ತರಲು ಹೋದಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ವಿದ್ಯಾರ್ಥಿನಿ ತಂದಿದ್ದ ಐದು ಬ್ಯಾಗ್’ಗಳ ಪೈಕಿ ಒಂದು ಬ್ಯಾಗ್ ನಾಪತ್ತೆಯಾಗಿದೆ.
ಪಿಂಕ್ ಬ್ಯಾಗ್ ಇರಲಿಲ್ಲ
ಶಿವಮೊಗ್ಗದ ಹಾಸ್ಟೆಲ್’ನಲ್ಲಿದ್ದುಕೊಂಡು ಬಿಎಸ್ಸಿ ಓದುತ್ತಿರುವ ಮಮತಾ ಎಂಬುವವರು ದಸರಾ ರಜೆ ಹಿನ್ನೆಲೆ ಊರಿಗೆ ತೆರಳುತ್ತಿದ್ದರು. ಸ್ನೇಹಿತೆಯೊಂದಿಗೆ ಬಸ್ಸು ಹತ್ತಿದ್ದ ಮಮತಾ, ತಾವು ತಂದಿದ್ದ ಐದು ಬ್ಯಾಗುಗಳನ್ನು ಬಸ್ಸಿನಲ್ಲಿ ಇರಿಸಿದ್ದರು. ಅಪರಿಚಿತನೊಬ್ಬ ಬಸ್ಸು ಏರಿ ಬಂದು ಮಮತಾ ಅವರನ್ನು ಈ ಬಸ್ಸು ಹೊಸದುರ್ಗ ಹೋಗುತ್ತದೆಯೇ ಎಂದು ವಿಚಾರಿಸಿದ್ದ.
ನಂತರ ಮಮತಾ ತಮ್ಮ ಸ್ನೇಹಿತೆಯನ್ನು ಬಸ್ಸಿನಲ್ಲಿ ಕೂರಿಸಿ ನೀರಿನ ಬಾಟಲಿ ತೆರಲು ಹೋಗಿದ್ದರು. ಚಿಲ್ಲರೆ ಸಮಸ್ಯೆಯಾಯಿತೆಂದು ಮಮತಾ ಅವರ ಸ್ನೇಹಿತೆ ಕೂಡ ಅಂಗಡಿ ಬಳಿಗೆ ತೆರಳಿದ್ದರು. ಮರಳಿ ಬಂದಾಗ ತಾವು ತಂದಿದ್ದ ಪಿಂಕ್ ಬ್ಯಾಗ್ ನಾಪತ್ತೆಯಾಗಿತ್ತು.
ಪಕ್ಕದ ಸೀಟಿನಲ್ಲಿತ್ತು ಮತ್ತೊಂದು ಬ್ಯಾಗ್
ಮಮತಾ ಅವರು ತಮ್ಮ ಬ್ಯಾಗ್ ಗಾಗಿ ಬಸ್ಸಿನಲ್ಲೆಲ್ಲ ಹುಡುಕಿದ್ದಾರೆ. ಆಗ ಪಕ್ಕದ ಸೀಟಿನಲ್ಲಿ ಮತ್ತೊಂದು ಬ್ಯಾಗ್ ಪತ್ತೆಯಾಗಿದೆ. ವಾರಸುದಾರರು ಇಲ್ಲದಿದ್ದರಿಂದ ತಮ್ಮ ಬ್ಯಾಗ್ ಹೊತ್ತೊಯ್ದವನೆ ಆ ಬ್ಯಾಗನ್ನು ಬಿಟ್ಟು ಹೋಗಿರುವ ಶಂಕೆ ಮೇರೆಗೆ ಪೊಲೀಸ್ ಠಾಣೆಗೆ ತಂದು ಒಪ್ಪಿಗೆ, ತಮ್ಮ ಬ್ಯಾಗ್ ಕಳುವಾದ ಬಗ್ಗೆ ದೂರು ನೀಡಿದ್ದಾರೆ.
ಮಮತಾ ಅವರ ಪಿಂಕ್ ಬ್ಯಾಗಿನಲ್ಲಿ ಮೊಬೈಲ್ ಫೋನ್, ಬಂಗಾರದ ಓಲೆ, ಐದು ಸಾವಿರ ರೂ. ನಗದು, ಬಿಎಸ್ಸಿ ಜೆರಾಕ್ಸ್ ನೋಟ್ಸ್, ಮೊದಲ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ಇಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200