ಶಿವಮೊಗ್ಗ ಲೈವ್.ಕಾಂ | SAGARA NEWS | 1 APRIL 2021
ಪುರಾಣ ಪ್ರಸಿದ್ಧ ಗಣಪತಿ ದೇವಸ್ಥಾನವೊಂದರಲ್ಲಿ ಗಣಪತಿ ಮೂರ್ತಿ ಕಳುವಾಗಿದೆ. ಸಂಜೆ ಇದ್ದ ಗಣಪತಿ ಮೂರ್ತಿ ಬೆಳಗ್ಗೆ ಕಣ್ಮರೆಯಾಗಿದೆ.
ಸಾಗರ ತಾಲೂಕು ನಾಡಕಲಸೆ ಗ್ರಾಮದ ಶ್ರೀ ರಾಮೇಶ್ವರ ಮತ್ತು ಮಲ್ಲಿಕಾರ್ಜು ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಗರ್ಭಗುಡಿಯ ಮುಂದೆ ಇದ್ದ ಗಣಪತಿ ಮೂರ್ತಿ ಕಳುವಾಗಿದೆ. ಈ ಮೂರ್ತಿ ಮೌಲ್ಯ ಸುಮಾರು 5 ಸಾವಿರದಿಂದ 10 ಸಾವಿರ ರೂ. ಇದೆ ಎಂದು ಅಂದಾಜಿಸಲಾಗಿದೆ.
ರಾತ್ರಿ ವೇಳೆ ಸೆಕ್ಯೂರಿಟಿ ಇಲ್ಲ
ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನವು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಸರ್ಕಾರದ ಅಧೀನದಲ್ಲಿ ಇರುವುದರಿಂದ ದೇವಸ್ಥಾನದ ಅಭಿವೃದ್ಧಿ ಮತ್ತು ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ರಾತ್ರಿ ವೇಳೆ ಸೂಕ್ತ ಭದ್ರತಾ ವ್ಯವಸ್ಥೆಯೂ ಇಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಮಾರ್ಚ್ 22ರಂದು ಸಂಜೆ ದೇವಸ್ಥಾನದ ಕಾವಲಿಗೆ ಇದ್ದ ಸೆಕ್ಯೂರಿಟಿಯು ಕೆಲಸ ಮುಗಿಸಿ ತೆರಳುವಾಗ ಗಣಪತಿ ಮೂರ್ತಿ ಇತ್ತು. ಬೆಳಗ್ಗೆ ಮತ್ತೊಬ್ಬ ಭದ್ರತಾ ಸಿಬ್ಬಂದಿ ಡ್ಯೂಟಿಗೆ ಬಂದಾಗ ಮೂರ್ತಿ ಕಣ್ಮರೆಯಾಗಿತ್ತು. ಕೂಡಲೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]