ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020
ತೀರ್ಥಹಳ್ಳಿ ತಾಲೂಕಿನ ಒಂಟಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಮನೆ ಸದಸ್ಯರ ಹತ್ಯೆಗೆ ಯತ್ನಿಸಿ, ದರೋಡೆ ಪ್ರಯತ್ನ ಮಾಡಿದ್ದಾರೆ.
ತಾಲೂಕಿನ ಮೇಗರವಳ್ಳಿ ಗ್ರಾಮದ ಪುರುಷೋತ್ತಮ ಹೆಗ್ಡೆ ಅವರ ಮನೆ ಮೇಲೆ ರಾತ್ರಿ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರು ಮಂದಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಕಳ್ಳರು ನುಗ್ಗುವುದನ್ನು ತಡೆಯಲು ಮುಂದಾದ ಪುರುಷೋತ್ತಮ ಹೆಗ್ಡೆ, ಅವರ ಸಹೋದರ ಗಣೇಶ್ ಹೆಗ್ಡೆ, ಮಗ ರೇಂವತ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಹಲ್ಲೆಯಿಂದ ಮೂವರಿಗೆ ಗಾಯವಾಗಿದೆ. ಈ ವೇಳೆ ಮನೆಯಲ್ಲಿ ಇದ್ದ ಉಳಿದವರು ಜೋರಾಗಿ ಕೂಗಿಕೊಂಡಿದ್ದಾರೆ. ಹಾಗಾಗಿ ಆರು ಮಂದಿ ಪರಾರಿಯಾಗಿದ್ದಾರೆ. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಪ್ರಕರಣ ಮಲೆನಾಡು ಭಾಗದ ಒಂಟಿ ಮನೆಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ತೀರ್ಥಹಳ್ಳಿಯ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದ ಒಂಟಿ ಮನೆಯೊಂದರ ಮೇಲೆ ಇತ್ತೀಚೆಗೆ ದುಷ್ಕರ್ಮಿಗಳು ಎರಡು ಬಾರಿ ದಾಳಿ ನಡೆಸಿದ್ದರು. ಮನೆಯಲ್ಲಿ ದರೋಡೆ ಯತ್ನ ನಡೆದಿತ್ತು. ಈಗ ಮೇಗರವಳ್ಳಿಯಲ್ಲಿ ಇಂತದ್ದೇ ಪ್ರಕರಣ ದಾಖಲಾಗಿದೆ.
ಸಾಗರ ತಾಲೂಕಿ ಬ್ಯಾಕೋಡು, ಇಕ್ಕೇರಿಯ ಕಸಕಸೆಕೂಡ್ಲು ಗ್ರಾಮದ ಒಂಟಿ ಮನೆಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ, ಎರಡು ಕಡೆಯಲ್ಲಿ ಡಬಲ್ ಮರ್ಡರ್ ಆಗಿತ್ತು. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]