ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 4 ಜನವರಿ 2022
ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತೀರ್ಥಹಳ್ಳಿ ಪಟ್ಟಣದಲ್ಲಿ ಶ್ರೀರಾಮೇಶ್ವರ ದೇವರ ರಥೋತ್ಸವ ವಿಜೃಂಭಣೆ ಯಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇವತ್ತು ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
ತೀರ್ಥಹಳ್ಳಿಯ ರಥಬೀದಿ, ಆಜಾದ್ ರಸ್ತೆ ಮಾರ್ಗದಲ್ಲಿ ರಥೋತ್ಸವ ನಡೆಯಿತು. ರಥಬೀದಿ, ಶ್ರೀರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರ ದಂಡೇ ಸೇರಿತ್ತು. ಜಾತ್ರೆ ವಿಶೇಷವಾಗಿ ಸೋಮವಾರ ತಾಲೂಕಿನಲ್ಲಿ ಶಾಲಾ, ಕಾಲೇಜಿಗೆ ಸ್ಥಳೀಯ ರಜೆ ನೀಡಿದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾತ್ರೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಶ್ರೀರಾಮೇಶ್ವರ ದೇವಸ್ಥಾನ ಧಾರ್ಮಿಕ ಮಂಡಳಿ ಅಧ್ಯಕ್ಷ ಡಿ.ಎಸ್. ವಿಶ್ವನಾಥ ಶೆಟ್ಟಿ, ತೆಪ್ಪೋತ್ಸವ ಸಮಿತಿ ಸಂಚಾಲಕ ಸೊಪುಗುಡ್ಡೆ ರಾಘವೇಂದ್ರ, ತಹಶೀಲ್ದಾರ್ ಡಾ. ಎಸ್.ಬಿ.ಶ್ರೀಪಾದ್ ಮತ್ತಿತರ ಪ್ರಮುಖರು ಇದ್ದರು. ಪ್ರಧಾನ ಅರ್ಚಕ ಲಕಿಶ್ ತಂತ್ರಿ, ರಾಜಶೇಖರ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನ ನಡೆಯಿತು.
ಎಳ್ಳಮಾವಾಸ್ಯೆ ಜಾತ್ರೆಯ ಅತ್ಯಂತ ಆಕರ್ಷಕ ಕಾರ್ಯಕ್ರಮವಾದ ತೆಪ್ಪೋತ್ಸವ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಇವತ್ತು ತುಂಗಾ ನದಿ ತೀರದಲ್ಲಿ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ತೀರ್ಥಹಳ್ಳಿ ಮತ್ತು ಸುತ್ತಮುತ್ತಲ ಊರುಗಳಿಂದ ಜನರು ಬರುತ್ತಾರೆ. ಆದರೆ ಕರೋನ ಕರಿ ನೆರಳಿನ ಹಿನ್ನೆಲೆಯಲ್ಲಿ ಈ ಭಾರಿ ರಾತ್ರಿ 8 ಗಂಟೆಗೆಲ್ಲ ತೆಪ್ಪೋತ್ಸವ ಮುಗಿಯಲಿದೆ.