SHIVAMOGGA LIVE NEWS | 24 MARCH 2023
SHIMOGA : ಕೂಡಲಿಯ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ (Kudli Jathre) ಅದ್ಧೂರಿಯಾಗಿ ನಡೆಯಿತು. ಈ ಬಾರಿ ಸುತ್ತಮುತ್ತಲ ಸುಮಾರು 200 ಗ್ರಾಮಗಳ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ (Kudli Jathre) ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರಹೊರೆಯ ಜಿಲ್ಲೆಯಿಂದಲು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡುತ್ತಾರೆ.
ಸಂಗಮದಲ್ಲಿ ವಿಶೇಷ ಪೂಜೆ
ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ತಾಲೂಕಿನ ಕೂಡಲಿಯಲ್ಲಿ ಸಂಗಮವಾಗುತ್ತವೆ. ಈ ಕ್ಷೇತ್ರದಲ್ಲಿ ಹೊಳೆಯಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಯುಗಾದಿ ಹಬ್ಬ ಮತ್ತು ಜಾತ್ರೆಯ ಹಿನ್ನೆಲೆ ದೊಡ್ಡ ಸಂಖ್ಯೆಯ ಭಕ್ತರು ಕೂಡಲಿಗೆ ಬಂದು ಪುಣ್ಯ ಸ್ನಾನ ಮಾಡಿದರು.
ದೇವರ ನೋಡಲು ತೆಪ್ಪದಲ್ಲಿ ಹೋಗಬೇಕು
ಶ್ರೀ ಸಂಗಮೇಶ್ವರ ಸ್ವಾಮಿಯ ದರ್ಶನ ಮತ್ತು ಜಾತ್ರೆ ನೋಡಲು ತೆಪ್ಪದಲ್ಲಿ ಹೋಗಬೇಕು. ಕೂಡಲಿ ದಂಡೆಯಿಂದ ಹೊಳೆಯ ನಡುಗಡ್ಡೆಗೆ ಹೋಗಿ ದೇವರ ದರ್ಶನ ಮಾಡಿದ ಭಕ್ತರು ಪೂಜೆ ಸಲ್ಲಿಸಿದರು. ಹೊಳೆಯ ನಡುಗಡ್ಡೆಯ ಮೇಲೆ ಅಂಗಡಿಗಳನ್ನು ಹಾಕಲಾಗಿತ್ತು. ತೆಪ್ಪದಲ್ಲಿ ಹೋಗಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ದೊಡ್ಡ ಸಂಖ್ಯೆಯ ಜನರು ಇಲ್ಲಿಗೆ ಆಗಮಿಸಿದ್ದರು.
ವಿಜೃಂಭಣೆಯ ರಥೋತ್ಸವ
ಜಾತ್ರೆ ಅಂಗವಾಗಿ ಶ್ರೀ ಸಂಗಮೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ ನಡೆಯಿತು. ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ ದೇವರುಗಳು ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ಊರ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ತಂದು ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಸ್ವಚ್ಛಗೊಳಿಸಲಾಯಿತು. ಹೊಳೆ ದಂಡೆ ಮೇಲೆ ಪೂಜೆ ಸಲ್ಲಿಸಿ ಬಳಿಕ ಊರಿಗೆ ಕೊಂಡೊಯ್ಯುಲಾಯಿತು. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇರಿದ್ದರು.
ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ
ಶಿವಮೊಗ್ಗ ನಗರಕ್ಕೆ ಸಮೀಪದಲ್ಲಿ ಇರುವ ಕೂಡಲಿ ಕ್ಷೇತ್ರವು ಪ್ರಮುಖ ಪ್ರವಾಸಿ ತಾಣವಾಗಿದೆ. ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಕ್ಷೇತ್ರ ಆಗಿರುವುದರಿಂದ ಇಲ್ಲಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನು ಹೊಳೆ ದಂಡೆ ಮೇಲೆ ಶ್ರೀ ಸಂಗಮೇಶ್ವರ ಸ್ವಾಮಿ ಗುಡಿ ಇದೆ. ಹೊಯ್ಸಳರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.
ಇದೆ ಗುಡಿಯಲ್ಲಿ ಈಗ ಪೂಜೆ ಸಲ್ಲಿಸಲಾಗುತ್ತೆ. ಜಾತ್ರೆಗೆ ಬರುವ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿ, ಸಂಗಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತೆಪ್ಪದ ಮೂಲಕ ನಡುಗಡ್ಡೆಯಲ್ಲಿ ನಡೆಯುತ್ತಿರುವ ಜಾತ್ರೆ ಹೋಗಿ ಬರುತ್ತಾರೆ.
ಇದನ್ನೂ ಓದಿ – GOOD NEWS | ಶಿವಮೊಗ್ಗದಿಂದ ವಿಮಾನ ಹಾರಾಟ ಶುರು, ಯಾವ ರೂಟ್? ಎಷ್ಟಿರುತ್ತೆ ಟಿಕೆಟ್ ರೇಟ್?