ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021
ಬೆಳಗಿನ ಜಾವ ಭದ್ರಾವತಿಯಲ್ಲಿ ಮೂರು ಕಡೆ ದರೋಡೆ ಮಾಡಿದ್ದ ದುಷ್ಕರ್ಮಿಗಳನ್ನು ಶಿವಮೊಗ್ಗದಲ್ಲಿ ಅರೆಸ್ಟ್ ಮಾಡಲಾಗಿದೆ. ಅದೇ ದಿನ ಬೆಳಗ್ಗೆ ಈ ದುಷ್ಕರ್ಮಿಗಳು ಶಿವಮೊಗ್ಗದಲ್ಲೂ ದರೋಡೆ ಮಾಡಿದ್ದರು. ಇವರ ವಿರುದ್ಧ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಳು ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಆಯನೂರು ಗೇಟ್’ನ ಗಗನ್ (19), ಬೊಮ್ಮನಕಟ್ಟೆಯ ಎಫ್ ಬ್ಲಾಕ್ ನಿವಾಸಿ ವಿಶಾಲ್ (19), ಬೊಮ್ಮನಕಟ್ಟೆಯ ಬಿ ಬ್ಲಾಕ್ ನಿವಾಸಿ ಪ್ರೀತಿಮ್ (19) ಬಂಧಿತರು.
ವಿಳಾಸ ಕೇಳುವ ನೆಪದಲ್ಲಿ ದರೋಡೆ
ಬೆಳಗಿನ ಜಾವ ರಸ್ತೆಯಲ್ಲಿ ವಿಳಾಸ ಕೇಳುವುದು, ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ನಡೆದು ಹೋಗುತ್ತಿರವವರನ್ನು ತಡೆದು ನಿಲ್ಲಿಸುತ್ತಿದ್ದರು. ಮಾತನಾಡುತ್ತಲೇ ಚಾಕು ತೆಗೆದು ಬೆದರಿಕೆಯೊಡ್ಡಿ ಹಣ, ಮೊಬೈಲು, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಗುರುವಾರ (ನವೆಂಬರ್ 4) ಬೆಳಗಿನ ಜಾವ ಕಲವೇ ಗಂಟೆಯಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ನಗರದ ಏಳು ಕಡೆಯಲ್ಲಿ ದರೋಡೆ ಮಾಡಿದ್ದರು.
(ಆಗಿಂದಾಗ್ಗೆ ಆರೋಗ್ಯ ತಪಾಸಣೆ ಅವಶ್ಯ. ಪರಿಣಿತ ವೈದ್ಯರು, ನುರಿತ ತಜ್ಞರಿಂದ ಸೂಕ್ತ ತಪಾಸಣೆ, ಸೂಕ್ತ ಸಲಹೆ)
ಯಾವ್ಯಾವ ಠಾಣೆ ವ್ಯಾಪ್ತಿಯಲ್ಲಿ ದರೋಡೆ?
ಮೂವರು ದರೋಡೆಕೋರರು ಶಿವಮೊಗ್ಗದ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಮೂರು ಕಡೆ, ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಒಂದು, ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು, ಭದ್ರಾವತಿ ಹಳೆನಗರ ಠಾಣೆ ವ್ಯಾಪ್ತಿಯಲ್ಲಿ ಮೂರು ಕಡೆ ದರೋಡೆ ಮಾಡಿದ್ದರು. ಪಲ್ಸರ್ ಬೈಕಿನಲ್ಲಿ ಮೂವರು ಬಂದು ದರೋಡೆ ಮಾಡಿದ್ದರು.
ಪಲ್ಸರ್ ಬೈಕ್ ಅವರದ್ದಲ್ಲ
ಈ ದುಷ್ಕರ್ಮಿಗಳು ದರೋಡೆಗೆ ಬಳಕೆ ಮಾಡುತ್ತಿದ್ದ ಪಲ್ಸರ್ ಬೈಕ್ ಕೂಡ ಅವರದ್ದಾಗಿರಲಿಲ್ಲ. ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ಪಲ್ಸರ್ ಬೈಕ್ ಕದ್ದು ತಂದು, ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದರು. ಗಗನ್, ವಿಶಾಲ್, ಪ್ರೀತಮ್ ಪಲ್ಸರ್ ಬೈಕಿನಲ್ಲಿ ತೆರಳಿ ಸಾಲು ಸಾಲು ದರೋಡೆ ಮಾಡಿದ್ದರು.
ಮೊಬೈಲು, ವ್ಯಾನಿಟಿ ಬ್ಯಾಗ್, ಚೈನು
ಬಂಧನದ ವೇಳೆ ಮೂವರಿಂದ ಹತ್ತು ಮೊಬೈಲ್ ಫೋನ್, ಒಂದು ವ್ಯಾನಿಟಿ ಬ್ಯಾಗ್, ಬೆಳ್ಳಿ ಸರ, ಪಲ್ಸರ್ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಕೋಟೆ ಠಾಣೆ ಪೊಲೀಸರು ಈ ದರೋಡೆಕೋರರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ | ಭದ್ರಾವತಿಯ ಒಂದೇ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂರು ಕಡೆ ದರೋಡೆ
(ಶಿವಮೊಗ್ಗದಲ್ಲಿ ಇದೇ ಮೊದಲು – ಲೈವ್ ಕಿಚಿನ್, ಏಳು ನಿಮಿಷದಲ್ಲಿ ರೆಡಿಯಾಗುತೆ ಕೇಕ್ – ಈಗಲೆ ಫೋನ್ ಮಾಡಿ, ನಿಮ್ಮ ಆರ್ಡರ್ ಬುಕ್ ಮಾಡಿ)