ಶಿವಮೊಗ್ಗದ ಲೈವ್.ಕಾಂ | SHIMOGA NEWS | 27 ಜನವರಿ 2022
ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಶಿವಮೊಗ್ಗ ಪೊಲೀಸರಿಗೆ ತರಬೇತಿ ನಡೆಸಲಾಗುತ್ತದೆ. ಆ ಮೂಲಕ ಪೊಲೀಸರ ಬಗ್ಗೆ ಜನರಲ್ಲಿರುವ ದೃಷ್ಟಿಕೋನ ಬದಲಾವಣೆ ಮಾಡುವತ್ತ ಗಮನ ಹರಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು.
ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ವತಿಯಿಂದ ಇವತ್ತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ದೂರುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಕುರಿತು ಆರೋಪಗಳು ಕೇಳಿ ಬರುತ್ತವೆ. ಹಾಗಾಗಿ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
‘ಬೀಟ್ ವ್ಯವಸ್ಥೆ ಚುರಕು’
ಇನ್ನು, ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆ ಬಲಗೊಳಿಸುವ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು.
‘ಬೀಟ್ ವ್ಯವಸ್ಥೆ ಇನ್ನಷ್ಟು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಒಂದು ಹಳ್ಳಿ ಅಂದರೆ ಎಷ್ಟು ಜನ ಇದ್ದಾರೆ. ಯಾರೆಲ್ಲ ಇದ್ದಾರೆ. ಅವರಲ್ಲಿ ಅಪರಾಧ ಹಿನ್ನೆಲೆ ಇರುವವರು ಯಾರು ಅನ್ನುವ ಕುರಿತು ಸಂಪೂರ್ಣ ಮಾಹಿತಿ ಸಿದ್ಧಪಡಿಸಿಕೊಳ್ಳಬೇಕು. ಇನ್ನು ಆರು ತಿಂಗಳಲ್ಲಿ ಕಟ್ಟುನಿಟ್ಟು ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
‘ಕಲ್ಲು ಹೊಡೆದು ತರಬೇತಿ’
ಮತ್ತೊಂದೆಡೆ ಗುಂಪುಗಳ ನಿರ್ವಹಣೆ ಕುರಿತು ಶಿವಮೊಗ್ಗ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಪೊಲೀಸರು ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ವಿಧಾನವನ್ನು ತಿಳಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದರು.
‘ಸಿಬ್ಬಂದಿಗೆ ಮಾಬ್ ಕಂಟ್ರೋಲ್ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಲ್ಲು ತೂರಾಟದ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ವಿಧಾನ ತಿಳಿಸಿ ಕೊಡಲಾಗುತ್ತಿದೆ. ಕಲ್ಲು ಹೊಡೆದು ಅದರಿಂದ ಪಾರಾಗಿ, ಪರಿಸ್ಥಿತಿ ಹತೋಟಿಗೆ ತರುವುದನ್ನು ಹೇಳಿಕೊಡಲಾಗುತ್ತಿದೆ’ ಎಂದು ತಿಳಿಸಿದರು.