SHIVAMOGGA LIVE NEWS | TRUST| 9 ಏಪ್ರಿಲ್ 2022
ಬಜರಂಗದಳ ಕಾರ್ಯಕರ್ತ ಹರ್ಷ ಹೆಸರಲ್ಲಿ ಚಾರಿಟೇಬಲ್ TRUST ಸ್ಥಾಪನೆ ಮಾಡಲಾಗಿದೆ. ಹರ್ಷ ಸಹೋದರಿ ಅಶ್ವಿನಿ ಅವರು ಈ ಟ್ರಸ್ಟ್’ನ ಅಧ್ಯಕ್ಷೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಅಶ್ವಿನಿ, ಹರ್ಷ ಸಾವಿನ ದುಃಖದಿಂದ ನಾವು ಹೊರಬಂದಿಲ್ಲ. ನಮ್ಮ ತಾಯಿ ಇನ್ನೂ ದುಃಖದಲ್ಲಿದ್ದಾರೆ. ತಂದೆಗೆ ಹುಷಾರಿಲ್ಲ. ಇವುಗಳ ಮಧ್ಯೆಯೇ ಸರ್ಕಾರ, ಸಂಘ -ಸಂಸ್ಥೆಗಳು, ಹಿಂದೂ ಧರ್ಮದ ಮುಖಂಡರು ನಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಹರ್ಷನ ಕನಸಿನಂತೆ ಈ ಆರ್ಥಿಕ ಸಹಾಯದ ಒಂದು ಭಾಗವನ್ನು ಟ್ರಸ್ಟ್ ಗಾಗಿ ಮೀಸಲಿಡುತ್ತೇವೆ ಎಂದರು.
ಯಾರಿಗೆ? ಯಾವುದೆಲ್ಲ ಜವಾಬ್ದಾರಿ?
ಹರ್ಷ ಚಾರಿಟೇಬಲ್ ಟ್ರಸ್ಟ್ ಗೆ ನಾನು ಅಧ್ಯಕ್ಷೆಯಾಗಿದ್ದೇನೆ. ನನ್ನ ಸಹೋದರಿ ರಜನಿ ಉಪಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಅವರು ವ್ಯವಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಕೆ.ಕೆ., ಖಜಾಂಚಿಯಾಗಿ ಕೆ. ಫಣೀಶ್ ಅವರಿದ್ದಾರೆ. ಇಂದಿನಿಂದಲೇ ಇದು ಜಾರಿಗೆ ಬಂದಿದೆ ಎಂದು ಅಶ್ವಿನಿ ತಿಳಿಸಿದರು.
ಟ್ರಸ್ಟ್’ನ ಪ್ರಮುಖ ಉದ್ದೇಶವೇನು?
ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ಟ್ರಸ್ಟ್ ನ ಮುಖ್ಯ ಉದ್ದೇಶ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗುವುದು. ಅನಾರೋಗ್ಯದಿಂದಿರುವ ಬಡವರಿಗೆ ನೆರವು ನೀಡುವುದು, ಗೋಶಾಲೆಗಳ ನಿರ್ಮಾಣ ಮಾಡುವುದಾಗಿದೆ. ಪ್ರಮುಖವಾಗಿ ಈ ವರ್ಷ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈಗಾಗಲೇ ಟ್ರಸ್ಟ್ ಪಿಎಫ್ಐ ಪ್ರಚೋದಿತ ಗಲಭೆಯಲ್ಲಿ ಮೃತನಾದ ವಿಶ್ವನಾಥ ಶೆಟ್ಟಿ ಅವರ ಪುತ್ರ ಯಶಸ್’ನ ವಿದ್ಯಾಭ್ಯಾಸಕ್ಕೆ ಮತ್ತು ಕಾಸರಗೋಡಿನಲ್ಲಿ ಮೃತರಾದ ಆರ್.ಎಸ್.ಎಸ್. ಕಾರ್ಯಕರ್ತ ಜ್ಯೋತಿಷ್ ಅವರ ಕುಟುಂಬಕ್ಕೆ 2 ಲಕ್ಷ ರೂ. ನೀಡಿದೆ. ಅವರ ಎರಡನೇ ಮಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹರ್ಷನ ಕುಟುಂಬ ಒಪ್ಪಿಗೆ ನೀಡಿದೆ. ಇದು ಟ್ರಸ್ಟ್ ಆರಂಭಕ್ಕೆ ಮುನ್ನುಡಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹರ್ಷನ ತಂದೆ ನಾಗರಾಜ್, ತಾಯಿ ಪದ್ಮಾ ನಾಗರಾಜ್, ಸೋದರಿ ರಜನಿ, ಟ್ರಸ್ಟ್ ಕಾರ್ಯದರ್ಶಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ್ ಕೆ.ಕೆ., ಖಜಾಂಚಿ ಫಣೀಶ್, ವಿನಯ್ ಇದ್ದರು.
TRUST
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200