ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021
ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ ಸ್ಪೋಟಕ ಪೂರೈಕೆ ಮಾಡಿದ್ದ ಆಂಧ್ರ ಪ್ರದೇಶದ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಆಂಧ್ರ ಪ್ರದೇಶದ ಅನಂತಪುರದ ಪಿ.ಶ್ರೀರಾಮುಲು (68), ಆತನ ಪುತ್ರ ಪಿ.ಮಂಜುನಾಥ ಸಾಯಿ (36), ಕಲ್ಲಗಂಗೂರಿನ ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ (76), ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರು.
ಮುಂಬೈನಲ್ಲಿ ಸಿಕ್ಕಿಬಿದ್ದ ಶ್ರೀರಾಮುಲು
ಶ್ರೀರಾಮುಲು ಮತ್ತು ಮಂಜುನಾಥ ಸಾಯಿ ಮುಂಬೈನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದ ಶಿವಮೊಗ್ಗ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್, ಎಎಸ್ಐ ವಿಜಯ್, ಕಿರಣ್ ಮೋರೆ ಅವರನ್ನು ಒಳಗೊಂಡ ತಂಡ ಇಬ್ಬರನ್ನು ಬಂಧಿಸಿದೆ.
ಆಂಧ್ರಕ್ಕೂ ತೆರಳಿದ್ದ ಟೀಮ್
ಸ್ಪೋಟ ಸರಬರಾಜು ಸಂಬಂಧ ತನಿಖೆ ನಡೆಸಲು ಆಂಧ್ರದ ಅನಂತಪುರಕ್ಕೂ ಶಿವಮೊಗ್ಗ ಪೊಲೀಸರ ಒಂದು ತಂಡ ಕಳುಹಿಸಲಾಗಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಮತ್ತು ಸೊರಬ ಠಾಣೆ ಇನ್ಸ್ ಪೆಕ್ಟರ್ ಮರುಳಸಿದ್ದಪ್ಪ ನೇತೃತ್ವದ ತಂಡ ಆಂಧ್ರಕ್ಕೆ ತೆರಳಿತ್ತು.
ಅಲ್ಲಿ ಪರವಾನಗಿ ಹೊಂದಿದ್ದ ಸ್ಪೋಟಕ ಗೋದಾಮು ಸ್ಥಾಪಿಸಿದ್ದ ಶ್ರೀರಾಮುಲು, ಅಕ್ರಮವಾಗಿ ಸ್ಪೋಟಕ ದಾಸ್ತಾನು ಮಾಡಿದ್ದು, ಲೈಸೆನ್ಸ್ ಇಲ್ಲದೆಯೆ ಸ್ಪೋಟಕ ಪೂರೈಕೆ ಮಾಡಿರುವ ಮಾಹಿತಿ ಸಂಗ್ರಹಿಸಿತ್ತು. ಈ ಸಂಬಂಧ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]