ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021
ಭದ್ರಾವತಿ ವಿಐಎಸ್ಎಲ್ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದ್ದು, ವಾರದೊಳಗಾಗಿ ಉತ್ಪಾದನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಐಎಸ್ಎಲ್ ಅವರೊಂದಿಗೆ ಎಂಎಸ್ಪಿಎಲ್ ಸಂಸ್ಥೆ ಆಕ್ಸಿಜನ್ ಉತ್ಪಾದಿಸಿಕೊಡುವ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಅದರ ಅವಧಿ ಮುಗಿದಿದೆ. ಜಿಲ್ಲಾಡಳಿತದ ಕೋರಿಕೆಯಂತೆ ಇದೀಗ ಆಕ್ಸಿಜನ್ ಉತ್ಪಾದಿಸಲು ಎಂಎಸ್ಪಿಎಲ್ ಮುಂದೆ ಬಂದಿದೆ. ಪ್ರತಿದಿನ 320 ಕೆಎಲ್ಡಿ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕೆ ಇದೆ. ಉತ್ಪಾದಿಸಿದ ಆಕ್ಸಿಜನ್ ವಿಎಸ್ಐಎಲ್ ತಮ್ಮಲ್ಲಿರುವ ಜಂಬೋ ಸಿಲಿಂಡರ್ಗಳ ಮೂಲಕ ಬಾಟ್ಲಿಂಗ್ ಮಾಡಲಿದ್ದಾರೆ ಎಂದರು.
ಪ್ರತಿದಿನ ಕೇವಲ 8 ಕೆಎಲ್ಡಿ ಆಕ್ಸಿಜನ್ ಮಾತ್ರ ಬಾಟ್ಲಿಂಗ್ ಮಾಡುವ ಸಾಮರ್ಥ್ಯ ಇಲ್ಲಿದೆ. ಲಿಕ್ವಿಡ್ ಆಕ್ಸಿಜನ್ ಆಗಿ ಪರಿವರ್ತಿಸುವ ತಾಂತ್ರಿಕ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಜಗದೀಶ ಶೆಟ್ಟರ್ ಅವರು ಗುರುವಾರ ಘಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಘಟಕದ ಉನ್ನತೀಕರಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]