ಶಿವಮೊಗ್ಗ ಲೈವ್.ಕಾಂ | SAGARA NEWS | 25 ನವೆಂಬರ್ 2021
ವಿದ್ಯುತ್ ಕಂಬ ಬದಲಾವಣೆ ಮಾಡಿದ ಕೆಲವೇ ಹೊತ್ತಿನಲ್ಲಿ ಗ್ರಾಮದ ಮನೆಗಳಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಅಚೇಕೊಪ್ಪದಲ್ಲಿ 9 ಮನೆಗಳಲ್ಲಿನ ವಿದ್ಯುತ್ ಯಂತ್ರೋಪಕರಣಗಳು ಸುಟ್ಟು ಹೋಗಿದೆ. ಇದಕ್ಕೆ ಮೆಸ್ಕಾಂ ನಿರ್ಲಕ್ಷವೇ ಕಾರಣ ಎಂದು ಎಂದು ಗ್ರಾಮಸ್ಥರು ಆರೋಪಿಸಿದ್ದು, ಸೂಕ್ತ ಪರಿಹಾರ ಆಗ್ರಹಿಸಿದ್ದಾರೆ.
ಕೆಳಗಿದ್ದ ವಿದ್ಯುತ್ ತಂತಿ
ಆಚೇಕೊಪ್ಪ ಗ್ರಾಮದಲ್ಲಿ ಫಲಾನುಭವಿಯೊಬ್ಬರ ಜಮೀನಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಹಳೇಯ ಸಿಂಗಲ್ ಫೇಸ್ ವಿದ್ಯುತ್ ತಂತಿ ಸ್ಥಳಾಂತರಿಸಿ ತ್ರೀಫೇಸ್ ವಿದ್ಯುತ್ ಸೌಲಭ್ಯ ಅಳವಡಿಸಲಾಗುತ್ತಿತ್ತು. ಅಳವಡಿಸಿದ್ದ ತಂತಿಯು ಕೆಳಗೆ ಇದ್ದು ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ತಕ್ಷಣ ಸರಿಪಡಿಸುವಂತೆ ಅರಳಗೋಡು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತ್ತಾಯಿಸಿದ್ದರು.
ಗ್ರಾಮ ಸಭೆಯ ಸೂಚನೆಯಂತೆ ಮಂಗಳವಾರ ಕಂಬವನ್ನು ಬದಲಾಯಿಸಿ, ಬೇರೆ ವಿದ್ಯುತ್ ತಂತಿ ಅಳವಡಿಸಲಾಗಿತ್ತು. ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಉಂಟಾದ ವ್ಯತ್ಯಯದಿಂದ ಹೆಚ್ಚುವರಿ ವಿದ್ಯುತ್ ಹರಿದು ಅಚೇಕೊಪ್ಪ ಗ್ರಾಮದ 9 ಮನೆಗಳಲ್ಲಿದ್ದ ಬಲ್ಬ್, ಟಿವಿ, ಮಿಕ್ಸಿ, ಫ್ರಿಡ್ಜ್, ಮನೆಯ ವೈರಿಂಗ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ.
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಆದ್ದರಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.