ಶಿವಮೊಗ್ಗದ ಲೈವ್.ಕಾಂ | RIPPONPETE NEWS | 4 ಫೆಬ್ರವರಿ 2022
ನಾಲ್ಕು ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಮತ್ತು ಆತನ ಮನೆಯವರ ಕಿರುಕುಳವೆ ಘಟನೆ ಕಾರಣ ಎಂದು ಮಹಿಳೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಹೊಸನಗರ ತಾಲೂಕು ಬಿದರಹಳ್ಳಿಯ ಚಿಟ್ಟೆಗದ್ದೆಯ ವಿದ್ಯಾ (32), ಮಗಳು ತನ್ವಿ (4) ಮೃತರು. ಮನೆ ಬಳಿಯ ಬಾವಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಬೆಳಗಿನ ಜಾವ ಬಾವಿಗೆ ಹಾರಿದ್ದಾರೆ
ಗುರುವಾರ ಬೆಳಗಿನ ಜಾವ ವಿದ್ಯಾ, ಮಗಳು ತನ್ವಿಯನ್ನು ಬಾವಿ ಬಳಿಗೆ ಕರೆದೊಯ್ದಿದ್ದಾರೆ. ವೇಲ್’ನಿಂದ ತನ್ವಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ವಿದ್ಯಾ ಅವರ ಮೊದಲನೆ ಮಗಳು ಪುಣ್ಯಾ ಬೆಳಗಿನ ಜಾವ ಎಚ್ಚರಗೊಂಡಿದ್ದಾಳೆ. ತಾಯಿ ಮತ್ತು ತಂಗಿ ಕಾಣದಿದ್ದರಿಂದ ತಂದೆ ಲೋಹಿತ್ ಅವರನ್ನು ಎಬ್ಬಿಸಿದ್ದಾಳೆ. ವಿದ್ಯಾ ಮತ್ತು ತನ್ವಿಗಾಗಿ ಮನೆ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ.
ಬಾವಿಯಲ್ಲಿ ಮೃತದೇಹ ಪತ್ತೆ
ವಿದ್ಯಾ ಮತ್ತು ತನ್ವಿಯ ಮೃತದೇಹವು ಮನೆಯ ಮುಂಭಾಗದ ಬಾವಿಯಲ್ಲಿ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಬಾವಿಗಿಳಿದು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಪತಿ, ಕುಟುಂಬದ ವಿರುದ್ಧ ದೂರು
ವಿದ್ಯಾ ಮತ್ತು ತನ್ವಿ ಆತ್ಮಹತ್ಯೆ ಪ್ರಕರಣ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರ ತಾಲೂಕು ಮುಡುಬ ಸಿದ್ದಾಪುರದ ವಿದ್ಯಾ ಅವರನ್ನು 2014ರಲ್ಲಿ ಹೊಸನಗರ ತಾಲೂಕು ಬಿದರಹಳ್ಳಿಯ ಚಿಟ್ಟೆಗದ್ದೆಯ ಲೋಹಿತ್ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಲೋಹಿತ್ ಅವರ ಮನೆಯವರು ಕಿರುಕುಳ ನೀಡುತ್ತಿದ್ದರಿಂದ ತಮ್ಮ ಮಗಳು, ಮೊಮ್ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.