SHIVAMOGGA LIVE NEWS | 30 JANUARY 2023
BHADRAVATHI | ರಾಷ್ಟ್ರೀಯ ಹೆದ್ದಾರಿ (Highway Road) ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯುವಕ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿನ್ನೆಲೆ ದಿಢೀರ್ ರಸ್ತೆ ತಡೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ತಾಲೂಕು ಕಾರೇಹಳ್ಳಿಯಲ್ಲಿ (Karehalli) ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಆಂಥೋಣಿ (30) ಎಂಬಾತ ಗುಂಡಿಗೆ ಬಿದ್ದು ಮೃತಪಟ್ಟಿರುವ ಶಂಕೆ ಇದೆ.
ಇವತ್ತು ಮೃತದೇಹ ಪತ್ತೆ
ಅಂಥೋಣಿ ಕಳೆದ ಎರಡು ದಿನದಿಂದ ಕಾಣಿಸಿರಲಿಲ್ಲ. ಮನೆಯವರು, ಸ್ನೇಹಿತರು ಎಲ್ಲೆಡೆ ಹುಡುಕಾಡಿದ್ದಾರೆ. ಇವತ್ತು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳದಲ್ಲಿನ ಗುಂಡಿಯಲ್ಲಿ ಅಂಥೋಣಿ ಮೃತದೇಹ ಪತ್ತೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೇ ಅಂತೋಣಿ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ದಿಢೀರ್ ರಸ್ತೆ ತಡೆ, ಟೈರ್ ಗೆ ಬೆಂಕಿ
ಅಕ್ರೋಶಗೊಂಡ ಸ್ಥಳೀಯರು ಕಾರಿಹಳ್ಳಿಯಲ್ಲಿ ದಿಢೀರ್ ರಸ್ತೆ (Highway Road) ತಡೆ ನಡೆಸಿದರು. ಅಧಿಕಾರಿಗಳು, ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು, ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಇದರಿಂದ ಈ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ಕೈ ಬಿಡುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಜೀವ ಭಯದಲ್ಲಿ ಓಡಾಡಬೇಕಿದೆ
ಶಿವಮೊಗ್ಗ – ತುಮಕೂರು ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾರೆಹಳ್ಳಿ ಬಳಿ ಕಾಮಗಾರಿ ಸ್ಥಳದಲ್ಲಿ ಚಾನಲ್ ಹಾದು ಹೋಗುತ್ತದೆ. ಇಲ್ಲಿ ಸೇತುವೆ ನಿರ್ಮಾಣಕ್ಕಾಗಿ ಗುಂಡಿ ತೆಗೆಯಲಾಗಿತ್ತು. ಚಾನಲ್ ನಲ್ಲಿ ನೀರು ಬಂದಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಇದೆ ಗುಂಡಿಯಲ್ಲಿ ಈಗ ಆಂಥೋಣಿ ಮೃತದೇಹ ಪತ್ತೆಯಾಗಿದೆ. ಗುಂಡಿಗಳನ್ನು ತೆಗೆದು ಹಾಗೆ ಬಿಟ್ಟಿರುವುದರಿಂದ ಆಂಥೋಣಿ ಅದರಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರ ದಾಳಿ, 557 ದಂಡ, 7 ಎಫ್ಐಆರ್, 182 ಲಘು ಕೇಸ್ ಪ್ರಕರಣ ದಾಖಲು
ಗುಂಡಿಗಳ ಬಳಿ ಬ್ಯಾರಿಕೇಡ್ ಅಳವಡಿಸದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಇರುವುದೆ ಘಟನೆಗೆ ಕಾರಣ ಎಂದು ಸ್ಥಳೀಯರು ಆಪಾದಿಸಿದ್ದಾರೆ.