ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021
ಜೋಗ, ಸಿಗಂದೂರು, ನೀನಾಸಂ ಪ್ರವಾಸಕ್ಕೆಂದು ಬಂದಿದ್ದ ಯುವಕರಿಬ್ಬರು ಸಾಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಗರದ ಜೋಗ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಯುವಕರಿಬ್ಬರು ಕೊಠಡಿ ಪಡೆದುಕೊಂಡಿದ್ದರು. ಸೆಪ್ಟೆಂಬರ್ 24ರಂದು ಯುವಕರು ರೂಂ ಬುಕ್ ಮಾಡಿಕೊಂಡಿದ್ದರು.
ಬಾಗಲಕೋಟೆಯಿಂದ ಬಂದಿದ್ದರು
ಯುವಕರಿಬ್ಬರು ಬಾಗಲಕೋಟೆಯ ಬನಹಟ್ಟಿ ನಗರದವರು. ಇವರನ್ನು ಸಂತೋಷ್ ಅಡವಿನ್ನವರ (23), ಹನುಮಂತ ಅಲಗೂರು (28) ನೇಣಿಗೆ ಶರಣಾದವರು. ಸೆಪ್ಟೆಂಬರ್ 24ರಂದು ಸಾಗರಕ್ಕೆ ಬಂದಿದ್ದ ಇವರು ಲಾಡ್ಜ್ ಬುಕ್ ಮಾಡಿಕೊಂಡಿದ್ದರು. ಮಧ್ಯಾಹ್ನ ಊಟ ಕೊಂಡೊಯ್ದು ರೂಂ ಬಾಗಿಲು ಹಾಕಿಕೊಂಡಿದ್ದರು.
ಬಾಗಿಲು ತಟ್ಟಿದ ರೂಂ ಬಾಯ್
ಶನಿವಾರ ರಾತ್ರಿ ಊಟ ಬೇಕಾ ಎಂದು ವಿಚಾರಿಸಲು ರೂಂ ಬಾಯ್ ಬಾಗಿಲು ತಟ್ಟಿದ್ದ. ಆದರೆ ಒಳಗಿನಿಂದ ಯಾವುದೆ ಪ್ರತಿಕ್ರಿಯೆ ಬರಲಿಲ್ಲ. ಮಲಗಿರಬೇಕು ಎಂದು ಭಾವಿಸಿಕೊಂಡು ರೂಂ ಬಾಯ್ ವಾಪಸ್ ತೆರಳಿದ್ದ. ಭಾನುವಾರ ಬೆಳಗ್ಗೆ ಬಹುಹೊತ್ತು ಯುವಕರು ರೂಂನಿಂದ ಹೊರಗೆ ಬಂದಿರಲಿಲ್ಲ. ಇದು ಲಾಡ್ಜ್ ಸಿಬ್ಬಂದಿ ಅನುಮಾನಕ್ಕೆ ಕಾರಣವಾಗಿತ್ತು.
ನೇಣು ಬಿಗಿದ ಸ್ಥಿತಿಯಲ್ಲಿ
ಈ ಕುರಿತು ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ, ಸಂತೋಷ್ ಮತ್ತು ಹನುಮಂತ ನೇಣಿಗೆ ಶರಣಾಗಿದ್ದರು. ರೂಂನದಲ್ಲಿದ್ದ ಸೀಲಿಂಗ್’ಗೆ ಇಬ್ಬರು ಪ್ರತ್ಯೇಕವಾಗಿ ನೇಣು ಬಿಗಿದುಕೊಂಡಿದ್ದರು. ಶನಿವಾರ ರಾತ್ರಿಯೇ ಘಟನೆ ಸಂಭವಿಸಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ಕರೋನ ಮತ್ತು ಲಾಕ್ ಡೌನ್ ಕಾರಣವಾ?
ಸಂತೋಷ್ ಮತ್ತು ಹನುಮಂತ ಅವರು ಸ್ನೇಹಿತರು. ಬೆಂಗಳೂರಿನಲ್ಲಿ ಹವಾನಿಯಂತ್ರಿತ ಹೊಸ ಮತ್ತು ಹಳೆಯ ಯಂತ್ರಗಳ ರಿಪೇರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕರೋನ ಲಾಕ್ ಡೌನ್’ನಲ್ಲಿ ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದರು. ಈ ನಡುವೆ ಜೋಗ, ಸಿಗಂದೂರು, ನೀನಾಸಂ ಪ್ರವಾಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದರು. ಬಸ್ ಟಿಕೆಟ್’ಗಳು ಕೂಡ ಇದನ್ನು ಸಾಬೀತು ಪಡಿಸಿವೆ. ಈ ಕುರಿತು ಅವರ ಕುಟುಂಬದವರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200