ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021
ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ಯುವಕರ ಗುರುತು ಪತ್ತೆಯಾಗಿದೆ. ಇಬ್ಬರೂ ಭದ್ರಾವತಿ ತಾಲೂಕು ಜಯಂತಿ ಗ್ರಾಮದವರು ಎಂದು ತಿಳಿದು ಬಂದಿದೆ.
ಮಾಚೇನಹಳ್ಳಿಯಲ್ಲಿ ಇವತ್ತು ಬೆಳಗ್ಗೆ ಕೆಎಸ್ಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಜಯಂತಿ ಗ್ರಾಮದ ಅಂಥೋಣಿ (34) ಮತ್ತು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಹೇಗೆ ಸಂಭವಿಸಿತು ಘಟನೆ?
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಬೈಕ್’ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಬೈಕ್’ನಲ್ಲಿದ್ದ ಯುವಕರು ದೇಹಗಳು ದೂರ ದೂರ ಬಿದ್ದಿದ್ದವು.
ಬಸ್ ಚಾಲಕನಿಗೆ ತರಾಟೆ
ಘಟನೆ ಬಳಿಕ ಸಾರ್ವಜನಿಕರು ಕೆಎಸ್ಆರ್’ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಪ್ರಯಾಣಿಕರು ಇದ್ದರು ವೇಗವಾಗಿ ಬಸ್ ಚಲಾಯಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.