ಮಾಜಿ ಶಾಸಕ ಅಪ್ಪಾಜಿಗೌಡರ ಕುರಿತು ಈ 15 ವಿಚಾರಗಳು ನಿಮಗೆ ಗೊತ್ತಿದೆಯಾ?

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಸೆಪ್ಟಂಬರ್ 2020

ಭದ್ರಾವತಿ ರಾಜಕಾರಣದ ಪ್ರಮುಖ ಹೆಸರು, ಅತಿ ಮುಖ್ಯ ವ್ಯಕ್ತಿತ್ವ ಎಂ.ಜೆ.ಅಪ್ಪಾಜಿಗೌಡ. ಅವರ ನಿಧನ ಕುಟುಂಬದವರಿಗಷ್ಟೇ ಅಲ್ಲ, ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಲ್ಲಿ ಅನಾಥ ಭಾವ ಮೂಡಿಸಿದೆ. ಈ ನಡುವೆ ಅಪ್ಪಾಜಿಗೌಡ ಅವರ ಕುರಿತು ತಿಳಿಯಬೇಕಿರುವ ಸಂಗತಿಗಳು ಹಲವು. ಅವುಗಳ ಪೈಕಿ ಕೆಲವು ಸಂಗತಿಗಳು ಇಲ್ಲಿವೆ.

ಅಪ್ಪಾಜಿಗೌಡ ಅವರು ಮೂಲತಃ ಮಂಡ್ಯ ಜಿಲ್ಲೆಯ ಮುತ್ತೆಗೆರೆ ಗ್ರಾಮದವರು. ತಂದೆಯ ರಾಜಕೀಯ ಅನುಭವವೆ ಅಪ್ಪಾಜಿಗೌಡರಿಗೆ ಸ್ಪೂರ್ತಿ. ಅಪ್ಪಾಜಿಗೌಡರ ತಂದೆ ಗ್ರಾಮ ಪಂಚಾಯಿತಿ ಚೇರ್ಮನ್ (ಅಧ್ಯಕ್ಷರ) ಆಗಿ ಉತ್ತಮ ಹೆಸರು ಸಂಪಾದಿಸಿದ್ದರು.

  1. ಭದ್ರಾವತಿಯಲ್ಲಿ ಸ್ಕೂಲ್‍ಗಳಿಗೆ ತೆರಳಿ ಅಪ್ಪಾಜಿಗೌಡ ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದರು.
  2. ಅಪ್ಪಾಜಿಗೌಡ ಅವರು ಭದ್ರಾವತಿ ಸರ್.ಎಂ.ವಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.
  3. ಕಾಲೇಜು ಸೆಕ್ರೆಟರಿ ಹುದ್ದೆಗೆ ನಡೆದ ಮತದಾನದಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಅಪ್ಪಾಜಿಗೌಡರನ್ನು ಆಯ್ಕೆ ಮಾಡಿದ್ದರು. ಇದರು ಈತನಕದ ದಾಖಲೆಯಾಗಿದೆ.
  4. ಅಪ್ಪಾಜಿಗೌಡ ಅವರು ವಿಐಎಸ್‍ಎಲ್‍ನಲ್ಲಿ ಉದ್ಯೋಗಿಯಾಗಿದ್ದರು. ಈ ವೇಳೆ ಕಾರ್ಮಿಕರ  ಸಂಘಟನೆ, ಅವರ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುತ್ತಿದ್ದರು.

5. ಪ್ರತಿ ತಿಂಗಳು 8ನೇ ತಾರೀಖು ಅಪ್ಪಾಜಿಗೌಡ ಅವರಿಗೆ ಸಂಬಳ ಬರುತ್ತಿತ್ತು. ಕಷ್ಟ ಅಂತಾ ಬರುತ್ತಿದ್ದ ಕಾರ್ಮಿಕರಿಗೆ ತಮ್ಮ ಸಂಬಳದ ಹಣದಲ್ಲಿ ಪಾಲು ಕೊಡುತ್ತಿದ್ದರು. ಎಷ್ಟು ಮಂದಿಯಿಂದ ಹಣವನ್ನೇ ಹಿಂಪಡೆದಿಲ್ಲವಂತೆ ಅಪ್ಪಾಜಿಗೌಡರು.

Kalleshwara-Enterprises.webp

6. ಬೆಳಗ್ಗೆ ವಿಐಎಸ್‍ಎಲ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಅಪ್ಪಾಜಿಗೌಡರು ಮಧ್ಯಾಹ್ನ 3 ಗಂಟೆಯಿಂದ ಕಾರ್ಮಿಕರ ಜೊತೆಗೆ ಸಭೆಗಳನ್ನು ನಡೆಸುತ್ತಿದ್ದರು. ಪ್ರತಿದಿನ ಕಾರ್ಮಿಕರ ಸಮಸ್ಯೆಗಳು, ಹೋರಾಟದ ಕುರಿತು ಚರ್ಚೆ ನಡೆಸುತ್ತಿದ್ದರು. ಇದರಿಂದಾಗಿ ಭದ್ರಾವತಿಯಲ್ಲಿ ಕಾರ್ಮಿಕ ಸಂಘಟನೆಗಳು ಮತಷ್ಟು ಬಿಗಿಯಾಗಿದವು.

7. ಕಾರ್ಮಿಕ ನಾಯಕನಾಗಿದ್ದ ಅಪ್ಪಾಜಿಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 1989ರ ಚುನಾವಣೆಯಲ್ಲಿ ಅಪ್ಪಾಜಿಗೌಡರು 25,819 ಮತಗಳನ್ನ ಪಡೆದಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಇಸಾಮಿಯಾ ಅವರು 36,487 ಮತ ಗಳಿಸಿದ್ದರು.

8. ಮೊದಲ ಚುನಾವಣೆಯಲ್ಲಿ ಪ್ರಚಾರದ ಖರ್ಚು, ವಚ್ಚಕ್ಕಾಗಿ ಜನರು ದೇಣಿಗೆ ನೀಡಿದ್ದರು. ಆದರೆ ಹಣದ ಕೊರತೆ ಇದ್ದ ಕಾರಣ, ತಮ್ಮ ನೆಚ್ಚಿನ ಬಜಾಜ್ ಚೇತಕ್ ಸ್ಕೂಟರನ್ನು ಅಪ್ಪಾಜಿಗೌಡರು ಮಾರಾಟ ಮಾಡಿದ್ದರು. ಇದೇ ಸ್ಕೂಟರ್‍ನಲ್ಲಿ ಅಪ್ಪಾಜಿಗೌಡರು ತಮ್ಮ ಕುಟುಂಬವನ್ನು ಕರೆದುಕೊಂಡು ನಗರದಲ್ಲಿ ಓಡಾಡುತ್ತಿದ್ದರು.

9. ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅಪ್ಪಾಜಿಗೌಡು ಅವರು 41,660 ಮತಗಳನ್ನು ಗಳಿಸಿದ್ದರು. ಜನತಾದಳದ ಶಿವಕುಮಾರ್ ಅವರು 20,412 ಮತ ಪಡೆದು ಸೋತಿದ್ದರು.

10. ಅಪ್ಪಾಜಿಗೌಡ ಅವರು ಏಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೂರು ಬಾರಿ ಗೆಲವು ಸಾಧಿಸಿದ್ದಾರೆ. ನಾಲ್ಕು ಬಾರಿ ಪರಾಜಯವಾಗಿದೆ. ಒಮ್ಮೆ ಮಾತ್ರ ಜೆಡಿಎಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

11, ಐದು ಚುನಾವಣೆಯಲ್ಲಿ ಅಪ್ಪಾಜಿಗೌಡ ಮತ್ತು ಸಂಗಮೇಶ್ವರ ಅವರ ನಡುವೆ ನೇರ ಹಣಾಹಣಿ ಇತ್ತು. ಸಂಗಮೇಶ್ವರ್ ವಿರುದ್ಧ ಅಪ್ಪಾಜಿಗೌಡ ಅವರು ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 1999 ಮತ್ತು 2013ರಲ್ಲಿ ಗೆಲುವು ಸಾಧಿಸಿದ್ದರು.

12. ಭದ್ರಾವತಿ ಜನರ ಪಾಲಿಗೆ ಅಪ್ಪಾಜಿಗೌಡ ಮನೆ ಕೋರ್ಟಿನಂತಾಗಿತ್ತು. ಅಪ್ಪಾಜಿಗೌಡರು ಕೊಡುವ ತೀರ್ಪು ಅಂತಿಮ ಎಂಬಂತಾಗಿತ್ತು. ಯಾವುದೆ ಗಲಾಟೆ, ವಿವಾದವಿದ್ದರು ಅಪ್ಪಾಜಿಗೌಡ ಅವರು ಪಂಚಾಯಿತಿ ನಡೆಸಿ, ತೀರ್ಪು ನೀಡಿದರೆ ಅದರಂತೆ ಎಲ್ಲರು ನಡೆದುಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದು ಕೊಠಡಿಯಿಂದ ಹೊರ ಬರುತ್ತಿದ್ದಂತೆ ಪಂಚಾಯಿತಿ, ಜನತಾದರ್ಶನ ಆರಂಭವಾಗುತ್ತಿತ್ತು. ನಡುರಾತ್ರಿವರೆಗೂ ಜನರ ಭೇಟಿ ನಿರಂತರವಾಗಿತ್ತು.

13. ಕಾಲೇಜಿನಲ್ಲಿದ್ದಾಗ ಕಬ್ಬಡಿ ಟೀಮ್‍ನ ಕ್ಯಾಪ್ಟನ್ ಆಗಿದ್ದರು ಅಪ್ಪಾಜಿಗೌಡರು. ನಂತರ ಇಸ್ಪೀಟ್‍ ಬಲು ಪ್ರಿಯವಾಗಿತ್ತು. ಇಸ್ಪೀಟ್ ಆಡುವ ಹವ್ಯಾಸ ರೂಢಿಸಿಕೊಂಡಿದ್ದರು. ಹಲವು ಸಂದರ್ಶನಗಳಲ್ಲೂ ತಮ್ಮ ಇಸ್ಪೀಟ್ ಪ್ರೇಮದ ಬಗ್ಗೆ ಹೇಳಿಕೊಂಡಿದ್ದರು.

15. ಭದ್ರಾವತಿ ಕ್ಷೇತ್ರದ ಜನರು ಸಮಸ್ಯೆಯಲ್ಲಿದ್ದಾರೆ ಅಂದರೆ ಯಾವುದೆ ಸಮಯವಾಗಲಿ, ಯಾವುದೆ ಊರಾಗಲಿ ಅಪ್ಪಾಜಿಗೌಡರು ಹೊರಟು ನಿಲ್ಲುತ್ತಿದ್ದರು. ಎಷ್ಟೊ ಬಾರಿ ನಡುರಾತ್ರಿ ಧರಣಿ ನಡೆಸಿದ ಉದಾಹರಣೆಗಳಿಗೆ. ಕ್ಷೇತ್ರದಲ್ಲಿ ಯಾರ ಮನೆಯಲ್ಲೇ ಶುಭ ಕಾರ್ಯ ನಡೆಯಲಿ, ಯಾವುದೆ ಮನೆಯಲ್ಲಿ ಸಾವು, ನೋವು ಸಂಭವಿಸಿದರು, ಅಪ್ಪಾಜಿಗೌಡರು ಭೇಟಿ ಕೊಡುತ್ತಿದ್ದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ಭದ್ರಾವತಿಯ ಕುಟುಂಬವೊಂದಕ್ಕೆ ಮೋಸವಾಗಿದೆ ಎಂದು ರಾತ್ರಿ ಪ್ರತಿಭಟನೆ ನಡೆಸಿದ್ದರು.

ಯಾವುದೆ ಪಕ್ಷದ ಕಾರ್ಯಕರ್ತರಿರಲಿ, ಯಾವುದೆ ಜಾತಿ, ಧರ್ಮವಿರಲಿ, ಅಪ್ಪಾಜಿಗೌಡರನ್ನು ಗೌರವದಿಂದ ಕಾಣುತ್ತಿದ್ದರು. ಅಧಿಕಾರವಿರಲಿ, ಅಧಿಕಾರ ಇಲ್ಲದಿರಲಿ, ಅಪ್ಪಾಜಿಗೌಡರ ಮನೆ ಮುಂದೆ ಜನ ಇದ್ದೇ ಇರುತ್ತಿದ್ದರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈಗ ಅಪ್ಪಾಜಿಗೌಡರಿಲ್ಲದೆ ಭದ್ರಾವತಿ ರಾಜಕಾರಣ ಖದರ್ ಕುಂದಿದಂತಾಗಿದೆ. ಬೆಂಬಲಿಗರಲ್ಲಿ ಅನಾಥ ಭಾವ ಮೂಡಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment