ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2020
ಅತಿಥಿ ಉಪನ್ಯಾಸಕರ ಬಾಕಿ ವೇತನದ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಸ್ ಮಾಡುತ್ತಿದ್ದಾರೆ. ಇದು ಅವರಿಗ ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ವಿಧಾನ ಪರಿಷತ್ನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಇರುವ ಕಾರಣಕ್ಕೆ ಕುಮಾರಸ್ವಾಮಿ ಅವರು ಅತಿಥಿ ಉಪನ್ಯಾಸಕರ ಬಾಕಿ ವೇತನದ ಕುರಿತು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ ಸದನದಲ್ಲಿ ಈ ವಿಚಾರವನ್ನು ನಾನು ಪ್ರಸ್ತಾಪ ಮಾಡಿದಾಗ ಕುಮಾರಸ್ವಾಮಿ ಅವರು ಒಮ್ಮೆಯು ಧ್ವನಿ ಎತ್ತಲಿಲ್ಲ. ಅಡಿಗೆ ಆದ ಮೇಲೆ ಬಡಿಸೋಕೆ ಕಾಂಗ್ರೆಸ್, ಜೆಡಿಎಸ್ ಪೈಪೋಟಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
22 ಸಾವಿರ ಅತಿಥಿ ಶಿಕ್ಷಕರ ಬಗ್ಗೆ ಮಾತಿಲ್ಲ
ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆಗೆ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಇದನ್ನು ತಿಳಿದುಕೊಂಡು ಕುಮಾರಸ್ಚಾಮಿ ಅವರು ಈಗ ಆಗ್ರಹಪಡಿಸುತ್ತಿದ್ದಾರೆ. 22 ಸಾವಿರ ಅತಿಥಿ ಶಿಕ್ಷಕರು, ಐಟಿಐ ಶಿಕ್ಷಕರಿಗೆ ವೇತನ ಬಾಕಿ ಇದೆ. ಈ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ. ಕುಮಾರಸ್ವಾಮಿ ಅವರು ತಮ್ಮ ಅವಧಿಯಲ್ಲಿ ಐದು ಸಾವಿರ ವೇತನ ಹೆಚ್ಚಳ ಮಾಡುವುದಾಗಿ ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರಿದ್ದರು ಎಂದು ಆಯನೂರು ಮಂಜುನಾಥ್ ಆರೋಪಿಸಿದರು.
87 ಕೋಟಿ ಬಾಕಿ ವೇತನಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಕೊಡುವ ಕುರಿತು ಉನ್ನತ ಶಿಕ್ಷಣ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಉನ್ನತ ಶಿಕ್ಷಣ ಸಚಿವರಿಗೆ ಕರೋನ ಬಂದ ಹಿನ್ನೆಲೆ ಪ್ರಸ್ತಾವನೆ ಸಲ್ಲಿಕೆ ತಡವಾಗಿತ್ತು. 87 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸದ್ಯದಲ್ಲೇ ವೇತನ ಬಿಡುಗಡೆ ಆಗಲಿದೆ. ಸದನದಲ್ಲಿ ತಾವು ಧ್ವನಿ ಏರಿಸಿದ್ದರಿಂದಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.