ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಗ ಜಲಪಾತದ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದೆ. ಕರೋನ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಜಲಪಾತ ವೀಕ್ಷಣೆಗೆ ಬಿಟ್ಟ ಆರೋಪದಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಪೈಕಿ ಮೂವರು ಹೋಂ ಗಾರ್ಡ್ ಸಿಬ್ಬಂದಿಗಳಿದ್ದಾರೆ.
ಜೋಗ ಜಲಪಾತ ವೀಕ್ಷಣೆಗೆ ಬರುವವರಿಗೆ RTPCR ನೆಗೆಟಿವ್ ವರದಿ ಅಥವಾ ಎರಡನೇ ಡೋಸ್ ಲಸಿಕೆ ಪಡೆದ ವರದಿ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್’ಗಳು ಈ ಆದೇಶಕ್ಕೆ ಕ್ಯಾರೆ ಅನ್ನದೆ, ಬಂದ ಪ್ರವಾಸಿಗರನ್ನು ಒಳಬಿಡುತ್ತಿದ್ದರು.
ದಿಢೀರ್ ದಾಳಿ ನಡೆಸಿದ ಆಫೀಸರ್ಸ್
ಜೋಗ ಗೇಟ್’ನಲ್ಲಿ ಸೆಕ್ಯೂರಿಟಿ ಗಾರ್ಡ್’ಗಳ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಗೆ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಗರ ಡಿವೈಎಸ್’ಪಿ ಅವರು ವಿಶೇಷ ತಂಡ ರಚಿಸಿ, ದಾಳಿಗೆ ಸೂಚಿಸಿದ್ದರು. ಪ್ರವಾಸಿಗರ ರೂಪದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರವಾಸಿಗರಂತೆ ಒಳಗೆ ಹೋದರು
ಪೊಲೀಸರ ವಿಶೇಷ ತಂಡ ಪ್ರವಾಸಿಗರಂತೆ ಜೋಗ ಜಲಪಾತಕ್ಕೆ ತೆರಳಿದ್ದರು. ಇವರಿಗೆ ಕೋವಿಡ್ ನೆಗೆಟಿವ್ ವರದಿಯಾಗಲಿ, ಲಸಿಕೆ ಪಡೆದ ರಿಪೋರ್ಟಾಗಿ ವಿಚಾರಿಸಲಿಲ್ಲ. ನೇರವಾಗಿ ಜೋಗ ಜಲಪಾತ ವೀಕ್ಷಣೆಗೆ ಕಳುಹಿಸಲಾಗಿತ್ತು. ಹಾಗಾಗಿ ಕೂಡಲೆ ಸೆಕ್ಯೂರಿಟಿ ಗಾರ್ಡ್ ಮತ್ತು ಅಂಗಡಿ ಮಾಲೀಕರೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಯಾರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ?
ಜೋಗದ ಸೆಕ್ಯೂರಿಟಿಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು, ಗೈಡ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಂದ್ರಶೇಖರ್, ಹೋಂ ಗಾರ್ಡ್’ಗಳಾದ ಮಂಜುನಾಥ, ಕೃಷ್ಣಪ್ಪ, ಮಂಜುನಾಥ, ಸೆಕ್ಯೂರಿಟಿ ಗಾರ್ಡ್’ಗಳಾದ ರಾಕೇಶ, ಪ್ರಭುದಾಸ, ಅಂಗಡಿ ಮಾಲೀಕ ಸಂಜು ಅಲಿಯಾಸ್ ಮಂಜುನಾಥ್ ಎಂಬುವವರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ಪ್ರಕರಣ ದಾಖಲು ಮಾಡಿದೆ.
ಗೇಟಲ್ಲಿ ಏನಾಗುತಿತ್ತು ಗೊತ್ತಾ?
ಕರೋನ ಮೂರನೆ ಅಲೆಯ ಭೀತಿ ಎದುರಾದ ಹಿನ್ನೆಲೆ, ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಕೆಲವು ಷರತ್ತು ವಿಧಿಸಿದ್ದರು. ಗೇಟ್’ನಲ್ಲಿ ಪ್ರವಾಸಿಗರ ಕೋವಿಡ್ ವರದಿ ಅಥವಾ ಲಸಿಕೆ ಪಡೆದ ವರದಿಯನ್ನು ಪರಿಶೀಲಿಸಬೇಕಿತ್ತು. ಆರಂಭದಲ್ಲಿ ವರದಿ ಕಡ್ಡಾಯವಾಗಿ ಪರಿಶೀಲನೆ ನಡೆಸುತ್ತಿದ್ದರು. ಆ ಬಳಿಕ ಪ್ರಭಾವ ಬೀರಿದವರಿಗೆ ಯಾವುದೆ ರಿಪೋರ್ಟ್ ಕೇಳದೆ ಒಳಗೆ ಬಿಡುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿದ್ದವು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200